ಮುಂಡರಗಿ: ಪಟ್ಟಣದ ಡಾ.ವೀರೇಶ ಹಂಚಿನಾಳ ಅವರು ಈಚೆಗೆ ಜರುಗಿದ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಪ್ರಯುಕ್ತ ಪಟ್ಟಣದ ವಿವಿಧ ವೈದ್ಯರು ಹಾಗೂ ಹಂಚಿನಾಳ ಅವರ ಅಭಿಮಾನಿಗಳು ಶುಕ್ರವಾರ ಪಟ್ಟಣದ ಬೃಂದಾವನ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆಯ ಅಧ್ಯಕ್ಷ ವೈ.ಎನ್.ಗೌಡರ, ಡಾ.ವೀರೇಶ ಹಂಚಿನಾಳ ಅವರು ಉತ್ತರ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ ಎಂದು ಹರ್ಷವ್ಯಕ್ತಪಡಿಸಿದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಡಾ.ವೀರೇಶ ಹಂಚಿನಾಳ ಅವರು ಮೊದಲ ಆದ್ಯತೆಯ ಅತ್ಯಧಿಕ ಮತಗಳನ್ನು ಪಡೆದು ಪ್ರಥಮ ಸುತ್ತಿನಲ್ಲಿಯೇ ಆಯ್ಕೆಯಾಗಿದ್ದಾರೆ. ಆ ಮೂಲಕ ಸೆನೆಟನಲ್ಲಿ ಈ ಮೊದಲಿನ ಕೇರಳ, ತಮಿಳುನಾಡು ಹಾಗೂ ದಕ್ಷಿಣ ಕರ್ನಾಟಕದವರ ಪ್ರಭಾವವನ್ನು ಕಡಿಮೆ ಮಾಡಿದ್ದಾರೆ. ಅವರ ಆಯ್ಕೆಯು ಎಲ್ಲರಲ್ಲಿ ಸಂತಸ ಮೂಡಿಸಿದೆ ಎಂದು ತಿಳಿಸಿದರು.
ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ ಮಾತನಾಡಿ, ಸಜ್ಜನ ವೈದ್ಯರಾದ ಡಾ.ವೀರೇಶ ಹಂಚಿನಾಳ ಅವರು ಎಲ್ಲರ ಪ್ರೀತಿ ಹಾಗೂ ಗೌರವಗಳಿಗೆ ಪಾತ್ರರಾಗಿದ್ದಾರೆ. ಈಗ ಸೆನೆಟ್ ಸದಸ್ಯರಾಗುವ ಮೂಲಕ ವೈದ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ಮುಖಂಡರಾದ ಆನಂದಗೌಡ ಪಾಟೀಲ, ಹೇಮಂತಗೌಡ ಪಾಟೀಲ, ಮಂಜುನಾಥ ಇಟಗಿ, ನಾಗರಾಜ ಹೊಂಬಳಗಟ್ಟಿ, ಪಾಲಾಕ್ಷಿ ಗಣದಿನ್ನಿ, ರುದ್ರಗೌಡ ಪಾಟೀಲ, ಅನೂಪಕುಮಾರ ಹಂಚಿನಾಳ, ನಾಗರಾಜ ಕೊರ್ಲಹಳ್ಳಿ, ಪ್ರಶಾಂತಗೌಡ ಪಾಟೀಲ, ದೇವಪ್ಪ ಕಂಬಳಿ, ಡಿ.ಜಿ.ಹಿರೇಮಠ, ಮೈಲಾರೆಪ್ಪ ಉದಂಡಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.