ಗದಗ: ‘ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದ ಅಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆಯು ಕೆಡಿಪಿ ಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ಕೆಡಿಪಿ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇರವಾಗಿ ಗಮನಿಸುವರು. ಅನುಷ್ಟಾನ ಏಜೆನ್ಸಿಗಳು ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕಾಮಗಾರಿಗಳನ್ನು ನಿರ್ವಹಿಸಬೇಕು’ ಎಂದು ಎಡಿಸಿ ದುರಗೇಶ್ ಕೆ.ಆರ್. ಸೂಚಿಸಿದರು.
ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕಾಮಗಾರಿ ನಿರ್ವಹಿಸುವಾಗ ನಿಗದಿಪಡಿಸಿದ ಅವಧಿ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಾಮಗಾರಿ ಅನುಷ್ಟಾನದಲ್ಲಿ ತೊಡುಕುಗಳು ಎದುರಾದಲ್ಲಿ ತಕ್ಷಣವೇ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು’ ಎಂದು ಸೂಚಿಸಿದರು.
‘2022-23 ಹಾಗೂ 2023-24ರ ಆರ್ಥಿಕ ವರ್ಷದಲ್ಲಿ ಕೈಗೊಂಡ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಪೂರ್ಣಗೊಳಿಸಿದ ಮಾಹಿತಿಯನ್ನು ಮುಂದಿನ ಒಂದು ವಾರದೊಳಗಾಗಿ ಗಾಂಧೀ ಸಾಕ್ಷಿ ಪೋರ್ಟಲ್ನಲ್ಲಿ ನಿಯಮಾನುಸಾರ ಛಾಯಾಚಿತ್ರಗಳೊಂದಿಗೆ ಅಪ್ಲೋಡ್ ಮಾಡಬೇಕು. ವಿನಾಃಕಾರಣ ವಿಳಂಬ ಬೇಡ’ ಎಂದು ಸೂಚಿಸಿದರು.
ಕಾಮಗಾರಿ ಬದಲಾವಣೆಗೆ ಬಯಸಿದಲ್ಲಿ ಸಂಬಂಧಿತ ಜನಪ್ರತಿನಿಧಿಗಳಿಂದ ಮಾಹಿತಿ ಸಲ್ಲಿಸಿ ಕಾಮಗಾರಿ ಮಾರ್ಪಡಿಸಲು ಅವಕಾಶವಿದ್ದು ಅನುಷ್ಟಾನ ಏಜೆನ್ಸಿಗಳು ಈ ಕುರಿತಂತೆ ಸೂಕ್ತಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ನಿರ್ಮಿತಿ ಕೇಂದ್ರ, ಪಿಆರ್ಇಡಿ, ಕೆಆರ್ಐಡಿಎಲ್, ಗ್ರಾಮೀಣ ನೀರು ಸರಬರಾಜು, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಅನುಷ್ಟಾನ ಏಜೆನ್ಸಿ ಹಾಗೂ ಇಲಾಖೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.
‘ಪರಿಶೀಲನಾ ವರದಿ ಕಡ್ಡಾಯ’
ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆ ಥರ್ಡ್ ಪಾರ್ಟಿ ಪರಿಶೀಲನಾ ವರದಿ ಕಡ್ಡಾಯವಾಗಿದೆ. 2023-24ರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅನುಷ್ಟಾನ ಏಜೆನ್ಸಿಗಳು ಆಗಸ್ಟ್ 20ರೊಳಗಾಗಿ ಬಾಕಿ ಉಳಿದ ಅಂದಾಜು ಪಟ್ಟಿ ಸಲ್ಲಿಸಬೇಕು. ಜತೆಗೆ ಕಾಮಗಾರಿ ಪೂರ್ಣಗೊಳಿಸಿದ ಕುರಿತಂತೆ ಬಳಕೆ ಪ್ರಮಾಣಪತ್ರ ನೀಡಬೇಕು. ಒಟ್ಟಾರೆ ಒದಗಿಸಿದ ಅನುದಾನ ಸದ್ಭಳಕೆಯಾಗುವಂತೆ ಅನುಷ್ಟಾನ ಏಜೆನ್ಸಿಗಳು ಕೆಲಸ ನಿರ್ವಹಿಸಬೇಕು ಎಂದು ಎಡಿಸಿ ದುರಗೇಶ್ ಕೆ.ಆರ್. ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.