ಸುಸ್ಥಿರತೆ ಅಭಿವೃದ್ಧಿಯ ಕ್ಷೇತ್ರದಲ್ಲಿ ಉನ್ನತಮಟ್ಟದ ಸಂಶೋಧಕರ ಅಂತರರಾಷ್ಟ್ರೀಯ ವೈಜ್ಞಾನಿಕ ವೇದಿಕೆಯಲ್ಲಿ ಭಾಗವಹಿಸಲು ಪ್ರಸಕ್ತ ವರ್ಷದ ಹಸಿರು ಪ್ರತಿಭೆಗಳ ಸ್ಪರ್ಧೆಯ 25 ವಿಜೇತರು ಜರ್ಮನಿ ತಲುಪಿದ್ದಾರೆ. ಇದರಲ್ಲಿ ಬೆಂಗಳೂರಿನ ಒಬ್ಬರು ಸೇರಿದಂತೆ ನಾಲ್ವರು ಭಾರತೀಯರಿದ್ದಾರೆ.
ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಸಚಿವರಾದ ಅಂಜಾ ಕಾರ್ಲಿಜೆಕ್ ಅವರ ಆಶ್ರಯದಲ್ಲಿ ಹಸಿರು ಪ್ರತಿಭೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಜಗತ್ತನ್ನು ಉತ್ತಮ ವಾಸಸ್ಥಾನವನ್ನಾಗಿಸುವ ನಿಟ್ಟಿನಲ್ಲಿ ಹಸಿರು ಚಿಂತನೆಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಯುವ ವಿಜ್ಞಾನಿಗಳಿಗೆ ‘ಹಸಿರು ಪ್ರಶಸ್ತಿ’ ಒಂದು ವೇದಿಕೆಯಾಗಿದೆ. ‘ಚತುರ ಹಸಿರು ಗ್ರಹ: ಸುಸ್ಥಿರ ಭವಿಷ್ಯಕ್ಕಾಗಿ ಪರಿಹಾರಗಳು’ ಎಂಬುದು ಕಾರ್ಯಕ್ರಮದ ಗುರಿಯಾಗಿದೆ. ಈಗ ಈ ಕಾರ್ಯಕ್ರಮ ದಶಕದ ಸಂಭ್ರಮದಲ್ಲಿದೆ.
ಪ್ರಸಕ್ತ ವರ್ಷಈ ಪ್ರಶಸ್ತಿಗಾಗಿ 97 ದೇಶಗಳಿಂದ 837 ಅರ್ಜಿಗಳು ಬಂದಿದ್ದವು. ಉನ್ನತಮಟ್ಟದ ತೀರ್ಪುಗಾರರ ಸಮಿತಿ ಪ್ರವರ್ಧಮಾನಕ್ಕೆ ಬರುತ್ತಿರುವ25 ಸಂಶೋಧಕರನ್ನು ಆಯ್ಕೆ ಮಾಡಿದೆ. ಈ ಗೌರವಕ್ಕೆ ನಾಲ್ವರು ಭಾರತೀಯರು ಪಾತ್ರರಾಗಿದ್ದಾರೆ. ಆ ಪೈಕಿ ದೇಬಂಜನ್ ದಾಸ್ ಬೆಂಗಳೂರಿನ ಐಐಎಸ್ಸಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಪ್ರತಿಭೆ. ಅಸ್ಸಾಂ ವಿವಿಯ ಪ್ರಿಯಾಂಕಾ ಸರ್ಕಾರ್ ಮತ್ತು ಕಾನ್ಪುರ್ ಐಐಟಿಯ ಡಾ. ವಿಕ್ರಮ್ ಸೋನಿ ಮತ್ತು ಬನಾರಸ್ ಹಿಂದು ವಿಶ್ವವಿದ್ಯಾಲಯ ಡಾ. ಶೇಖ್ ಆದಿಲ್ ಎಡ್ರಿಸಿ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಮುಂಬರುವ ದಿನಗಳಲ್ಲಿ ಈ ಹಸಿರು ಪ್ರತಿಭೆಗಳು ಪೂರ್ವಜರ್ಮನಿಯ ಹಸಿರು ವಿಜ್ಞಾನದ ಪ್ರಮುಖ ಕೇಂದ್ರಗಳನ್ನು ಭೇಟಿ ಮಾಡಲಿದ್ದಾರೆ. ಸುಸ್ಥಿರತೆ ಸಂಶೋಧನೆ ಕ್ಷೇತ್ರದ ಗಣ್ಯರನ್ನು ಶಿಕ್ಷಣ ಸಂಸ್ಥೆಗಳು ಮತ್ತು ಕಂಪನಿಗಳಲ್ಲಿ ಭೇಟಿಯಾಗಲಿದ್ದಾರೆ.
ಅಕ್ಟೋಬರ್ 24ರಂದು ಜರ್ಮನಿಯ ಶಿಕ್ಷಣ ಮತ್ತು ಸಂಶೋಧನೆ ಇಲಾಖೆ ವತಿಯಿಂದ ನಡೆಯುವ ಸಮಾರಂಭದಲ್ಲಿ 25 ಹಸಿರು ಪ್ರತಿಭೆಗಳನ್ನು ಗೌರವಿಸಲಾಗುತ್ತಿದೆ.
ಪ್ರಶಸ್ತಿ ವಿಜೇತರ ವೈಯಕ್ತಿಕ ಸಂಶೋಧನಾ ವಿವರಗಳನ್ನು ವೆಬ್ಸೈಟ್https://www.greentalents.de/awardees-2019.php ರಲ್ಲಿ ಸಾದರಪಡಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.