ADVERTISEMENT

`ಅಂಗನವಾಡಿ ಆಹಾರದ ಗುಣಮಟ್ಟ ಕಾಪಾಡಿ'

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 6:59 IST
Last Updated 19 ಡಿಸೆಂಬರ್ 2012, 6:59 IST

ಹಾಸನ: `ಆಹಾರ ಪದಾರ್ಥ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದು ಅತಿ ಮುಖ್ಯ. ಗರ್ಭಿಣಿಯರು, ಬಾಣಂತಿಯರಿಗೆ ವಿತರಿಸುವ ಸಲುವಾಗಿ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿರುವ ಮಹಿಳಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಹೆಚ್.ಸಿ.ಚಿದಾನಂದ್ ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಯೂತ್ ಹಾಸ್ಟೆಲ್ ಸಭಾಂಗಣದಲ್ಲಿ ಜಿಲ್ಲೆಯ ನಾಲ್ಕು ಮಹಿಳಾ ಆಹಾರ ತಯಾರಿಕಾ ಕೇಂದ್ರಗಳ ಸದಸ್ಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆಹಾರ ಉತ್ಪಾದನಾ ಘಟಕಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

`ಜಿಲ್ಲೆಯಲ್ಲಿರುವ ನಾಲ್ಕು ಮಹಿಳಾ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರಗಳ ನಿರ್ವಹಣೆ ಸಮಾಧಾನಕರವಾಗಿದೆ, ಅದು ಇನ್ನಷ್ಟು ಉತ್ತಮಗೊಳ್ಳಬೇಕು. ಆಹಾರ ತಯಾರಿಸಿ ಸರಬರಾಜು ಮಾಡಿದ ನಂತರ ಅದನ್ನು ಬಳಕೆ ಮಾಡುವವರಿಂದ ಪ್ರತಿಕ್ರಿಯೆ ಪಡೆದು ಗುಣಮಟ್ಟ ಹೆಚ್ಚಳದತ್ತ ನಿರಂತರ ಗಮನಹರಿಸಬೇಕು. ಈ ತರಬೇತಿ ಕೇಂದ್ರಗಳ ಸಮಗ್ರ ಬಲವರ್ಧನೆಯೇ ತರಬೇತಿಯ ಮೂಲ ಉದ್ದೆೀಶ. ಈ ಘಟಕಗಳು ಇನ್ನಷ್ಟು  ಸಬಲಗೊಳ್ಳಬೇಕಾಗಿದೆ' ಎಂದು ಚಿದಾನಂದ್ ನುಡಿದರು.

ನಾಲ್ಕು ಘಟಕಗಳ 80 ಸದಸ್ಯರಿಗೆ ಎರಡು ಹಂತಗಳಲ್ಲಿ ಮೈರಾಡ ಪ್ರಚೋದನಾ ಸಂಸ್ಥೆ ಸಹಕಾರದೊಂದಿಗೆ ಇಲಾಖೆಯ ಮೂಲಕ ತರಬೇತಿ ನೀಡಲಾಗುತ್ತಿದೆ.

ಚನ್ನರಾಯಪಟ್ಟಣ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಪ್ಪಗೌಡ, ಮೇಲ್ವಿಚಾರಕರಾದ ರೂಪಾ ಹಾಗೂ ಪ್ರಚೋದಯಾ ಸಂಸ್ಥೆಯ ಪೌಲಸ್ ಈ ಸದಸ್ಯರಿಗೆ ತರಬೇತಿ ನೀಡುತ್ತಿದ್ದಾರೆ.

ತರಬೇತಿ ಕಾರ್ಯಾಗಾರದ ವೇಳೆ ವಾರ್ತಾ ಇಲಾಖೆ ಮೈಸೂರು ವಿಭಾಗದ ಉಪ ನಿರ್ದೆಶಕ ಎ.ಆರ್.ಪ್ರಕಾಶ್,ಹಾಸನ ಜಿಲ್ಲೆ ವಾರ್ತಾಧಿಕಾರಿ ವಿನೋದ್ ಚಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಶಿವಸ್ವಾಮಿ ಹಾಜರಿದ್ದು ಮಹಿಳಾ ಸದಸ್ಯರಿಂದ ಮಾಹಿತಿ ಪಡೆದರು.

ತಮ್ಮ  ಕ್ಷೇತ್ರಾನುಭವ ಹಂಚಿಕೊಂಡ ಮಹಿಳಾ ಸದಸ್ಯರು ತಾವು ತಯಾರಿಸುತ್ತಿರುವ ಉತ್ಪಾದನೆಗಳನ್ನು ಪ್ರದರ್ಶಿಸಿದರು. ಸರ್ಕಾರದಿಂದ ಇನ್ನಷ್ಟು ನೆರವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.