ಚನ್ನರಾಯಪಟ್ಟಣ: ಪ್ರತಿ ತಿಂಗಳು ಮೊದಲ ದಿನ ‘ಅಂಗವಿಕಲರ ಕುಂದು ಕೊರತೆ ನಿವಾರಣಾ ಸಭೆ’ ಯನ್ನು ಪಟ್ಟಣದ ಮಿನಿವಿಧಾನಸೌಧದಲ್ಲಿ ಆಯೋಜಿಸಲಾಗುವುದು ಎಂದು ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು ಹೇಳಿದರು. ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ’ಸಾಮಾಜಿಕ ಭದ್ರತಾ ಯೋಜನೆಯ ಅದಾಲತ್ತು ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಅಂಗವಿಕಲರಿಗೆ ಅಗತ್ಯ ಮಾಹಿತಿ, ಸವಲತ್ತು ಒದಗಿಸಲಾಗುವುದು.
ಒಂದನೇ ತಾರೀಕಿನಂದು ಸರ್ಕಾರಿ ರಜೆ ಇದ್ದರೆ ಮಾರನೇ ದಿನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯವೇತನ, ಅಂಗವಿಕಲ, ವಿಧವಾ ವೇತನ, ಮನಸ್ವಿನಿ, ಮೈತ್ರಿ, ಅಂತ್ಯ ಸಂಸ್ಕಾರ ಸಹಾಯಧನ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಆದರ್ಶ ವಿವಾಹ ಮತ್ತು ಆಮ್ ಆದ್ಮಿ ಯೋಜನೆಯ ಸವಲತ್ತು ಅರ್ಹರು ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಸಿ.ಜಿ. ಸೋಮಶೇಖರ್ ಮಾತನಾಡಿ, ಅಂಗವಿಕಲರಿಗೆ ಅನುಕಂಪದ ಬದಲು ಕಾನೂನು ಸೌಲಭ್ಯ ಒದಗಿಸಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆಯಬೇಕು ಎಂದು ಆಗ್ರಹಿಸಿದರು. ಗ್ರೇಡ್–2 ತಹಶೀಲ್ದಾರ್ ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗಂಗಪ್ಪಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.