ADVERTISEMENT

ಅರಸೀಕೆರೆ: ಸಾಹಿತ್ಯ ಹಬ್ಬ, ಸಾರಸ್ವತರ ಕಲರವ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 10:00 IST
Last Updated 4 ಸೆಪ್ಟೆಂಬರ್ 2011, 10:00 IST

ಅರಸೀಕೆರೆ: ತಾಲ್ಲೂಕು ಮಟ್ಟದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅರಸೀಕೆರೆ ಸಿದ್ಧವಾಗಿ ನಿಂತಿದೆ.
ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಹೊಯ್ಸಳ ಮಹಾದ್ವಾರ, ಅಮರಗಿರಿ ಸಭಾಂಗಣ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಬೃಹತ್ ವೇದಿಕೆಗಳು ಸಾಹಿತ್ಯಾಸಕ್ತರನ್ನು ಬರಮಾಡಿ ಕೊಳ್ಳಲು ಶೃಂಗರಿಸಿಕೊಂಡು ನಿಂತಿವೆ. ಭಾನುವಾರ (ಸೆ.4) ಬೆಳಿಗ್ಗೆ 11 ಗಂಟೆಗೆ ಸಾಹಿತ್ಯದ ಉತ್ಸವಕ್ಕೆ ಚಾಲನೆ ಲಭಿಸಲಿದೆ.

ಸಮ್ಮೇಳನಾಧ್ಯಕ್ಷ ಡಾ. ಬಂಗಾರಿ ರೇಣುಕ ಅಧ್ಯಕ್ಷತೆಯಲ್ಲಿ ನಾನಾ ಗೋಷ್ಠಿಗಳು ಹಾಗೂ ಕಾರ್ಯಕ್ರಮಗಳು ಜರುಗಲಿವೆ.

ಬೆಳಿಗ್ಗೆ 8.30ಕ್ಕೆ ತಹಶೀಲ್ದಾರ ಎಂ.ಎಸ್. ಶಿವಕುಮಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ನಂತರ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಪರಮೇಶ್ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸುವರು. ಪಟ್ಟಣದ ಪಿ.ಪಿ ವೃತ್ತದಿಂದ ಸಭಾ ಮಂಟಪದವರೆಗೂ ಪುಷ್ಪಾಲಂಕೃತ ತೆರೆದ ವಾಹನದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.

ಇದಾದರೆ ಸಭಾ ಕಾರ್ಯಕ್ರಮವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿ ಸುವರು. ಪರಿಷತ್ ಸ್ಮರಣ ಸಂಚಿಕೆಯನ್ನು ಬೇಲೂರು ಶಾಸಕ ವೈ.ಎನ್. ರುದ್ರೇಶ್‌ಗೌಡ ಬಿಡುಗಡೆ ಮಾಡುವರು. ಪುಸ್ತಕ ಪ್ರದರ್ಶನ ಮಳಿಗೆಗಳನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ. ನಂಜುಂಡಪ್ಪ ಉದ್ಘಾಟಿಸಲಿದ್ದಾರೆ. ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಉದಯರವಿ, ಖ್ಯಾತ ಲೇಖಕ ಹಾಗೂ ವಿಮರ್ಶಕ ಡಿ.ಎನ್. ಯೋಗೀಶ್, ನಿಕಟ ಪೂರ್ವ ಅಧ್ಯಕ್ಷ ಜಾವಗಲ್ ವಸಂತಕುಮಾರ್, ತಾಲ್ಲೂಕು ಜಾನಪದ ಪರಿಷತ್ ಗೌರವಾಧ್ಯಕ್ಷೆ ಲಲಿತಾ ಜಯಣ್ಣ, ಅಧ್ಯಕ್ಷ ಜಾವಗಲ್ ಪ್ರಸನ್ನ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ. ಬಸವರಾಜು ಉಪಸ್ಥಿತರಿರುವರು. 

ಮಧ್ಯಾಹ್ನ 1.30ರಿಂದ ವಿಚಾರಗೋಷ್ಠಿ ನಡೆಯುವವು. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕ.ಸಾ.ಪ ಕೇಂದ್ರದ ಕೋಶಾಧ್ಯಕ್ಷ ಪುಂಡಲಿಕ ಹಾಲಂಬಿ ಸಮಾರೋಪ ಭಾಷಣ ಮಾಡಲಿದ್ದಾರೆ. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ರಂಗೇಗೌಡ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಡಾ.ಮುದ್ದು ಮಲ್ಲೇಶ್, ಡಾ ಬಿ.ಡಿ. ಕುಮಾರ್, ಡಾ.ಎಚ್. ಆರ್. ಸ್ವಾಮಿ, ಡಾ.ಕೆ.ಎಸ್. ಹರಶಿವಮೂರ್ತಿ, ಎಸ್ ಪರಶಿವಮೂರ್ತಿ, ಜಾವಗಲ್ ವಸಂತ್‌ಕುಮಾರ್ ಅವರನ್ನು ಸನ್ಮಾನಿಸಲಾಗುವುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.