ಬೆಂಗಳೂರು: ಹಾಸನ ಜಿಲ್ಲೆಯ ಹೇಮಾವತಿ ನದಿ ಹಿನ್ನೀರು ಪ್ರದೇಶದಲ್ಲಿರುವ 25 ಆನೆಗಳನ್ನು ಹಿಡಿದು, ಸುರಕ್ಷಿತ ಪ್ರದೇಶದಲ್ಲಿಡಬೇಕು ಎಂದು ಹೈಕೋರ್ಟ್ ಆದೇಶದ ಮೇರೆಗೆ ರಚಿಸಲಾಗಿದ್ದ ರಾಜ್ಯ ಆನೆ ಕಾರ್ಯಪಡೆ ಶಿಫಾರಸು ಮಾಡಿದೆ.
ಆಲೂರು ಮತ್ತು ಅರಕಲಗೂಡು ಪ್ರದೇಶಕ್ಕೆ ನುಗ್ಗದಂತೆ, ಅವುಗಳನ್ನು ಸುರಕ್ಷಿತ ವಲಯಕ್ಕೆ ಸೀಮಿತಗೊಳಿಸಬೇಕು. ಈ ಪ್ರದೇಶದ ಸುತ್ತ ಸೂಕ್ತ ಬೇಲಿ ನಿರ್ಮಾಣ ಆಗಬೇಕು ಎಂದು 145 ಪುಟಗಳ ವರದಿಯಲ್ಲಿ ಕಾರ್ಯಪಡೆ ಶಿಫಾರಸು ಮಾಡಿದೆ. ಕ್ಷೇತ್ರ ಭೇಟಿ, ಆನೆ ದಾಳಿಯಿಂದ ತೊಂದರೆಗೆ ಒಳಗಾದ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಿ, ಈ ವರದಿ ಸಿದ್ಧಪಡಿಸಲಾಗಿದೆ ಎಂದು ಕಾರ್ಯಪಡೆ ಮುಖ್ಯಸ್ಥ ಡಾ. ರಾಮನ್ ಸುಕುಮಾರನ್ ಹೇಳಿದ್ದಾರೆ.
ಅರಕಲಗೂಡು - ಆಲೂರು ಪ್ರದೇಶದಲ್ಲಿ ಆನೆ ಕಾರಿಡಾರ್ ನಿರ್ಮಿಸುವ ಯೋಜನೆ ಸೂಕ್ತವಲ್ಲ. ಆನೆಗಳು ಹೆಚ್ಚಾಗಿ ಇರುವ ಪ್ರದೇಶದಲ್ಲಿ ವಿದ್ಯುತ್ ತಂತಿಗಳ ಎತ್ತರವನ್ನು ಕನಿಷ್ಠ 20 ಅಡಿ ಹೆಚ್ಚು ಮಾಡಿ ಎಂದು ಸೂಚಿಸಿದ್ದರೂ ವಿದ್ಯುತ್ ಸರಬರಾಜು ಕಂಪೆನಿಗಳು ನಿರ್ಲಕ್ಷ ಮಾಡಿವೆ. ರಾಷ್ಟ್ರೀಯ ವನ್ಯಜೀವಿ ಮಂಡಳಿ, ವಿದ್ಯುತ್ ತಂತಿಗಳು ಎಷ್ಟು ಎತ್ತರದಲ್ಲಿರಬೇಕು ಎಂಬ ಕುರಿತು ನೀಡಿರುವ ಮಾರ್ಗಸೂಚಿ ಅನ್ವಯ ಕ್ರಮ ಜರುಗಿಸುವಂತೆ ಕಂಪೆನಿಗಳಿಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.