ಅರಸೀಕೆರೆ: ಸಣ್ಣಪುಟ್ಟ ಕೆಲಸಗಳಿಗೆ ಅರ್ಜಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದ ಸಂಕಟ... ಸರ್ಕಾರದಿಂದ ಆದೇಶವಾಗಿದ್ದರೂ, ಅಧಿಕಾರಿಗಳು ಕೆಲಸ ಮಾಡಿಕೊಡದ ನೋವು.... ತಲೆಮಾರಿನ ನೆಲದ ನಂಟು ಬಿಟ್ಟು ಬಂದರೂ ಸಿಕ್ಕದ ಪರಿಹಾರ... ಹೀಗೆ ನೂರಾರು ಅಹವಾಲು ಹೊತ್ತು ಬಂದವರು ಕಣ್ಣೀರುಗರೆದರು.... ತಾಲ್ಲೂಕಿನ ಕಣಕಟ್ಟೆ ನಾಡ ಕಚೇರಿಯಲ್ಲಿ ಮಂಗಳವಾರ ನಡೆದ ಕಂದಾಯ ಅದಾಲತ್ನಲ್ಲಿ ಕಂಡ ದೃಶ್ಯಗಳಿವು. ತಹಶೀಲ್ದಾರ್ ಎನ್.ವಿ. ನಟೇಶ್ ಅಹವಾಲುಗಳನ್ನು ಆಲಿಸಿದರು.
ಬೆಳಿಗ್ಗೆ 11.30ಕ್ಕೆ ಆರಂಭವಾಗ ಬೇಕಿದ್ದ ಸಭೆ ಮಧ್ಯಾಹ್ನ 2ಕ್ಕೆ ಆರಂಭವಾಯಿತು. ಆದರೂ ಜನರ ಸಂಖ್ಯೆ ಕಡಿಮೆಯಾಗಿರಲಿಲ್ಲ.ಮೊದಲೇ ನೂರಾರು ಅರ್ಜಿಗಳನ್ನು ರೈತರಿಂದ ಸ್ವೀಕರಿಸಿ ಗಣಕೀಕೃತ ಯಂತ್ರದಲ್ಲಿ ದಾಖಲಿಸಲಾಗಿತ್ತು. ಪಿಂಚಣಿ, ಪಹಣಿ ತಿದ್ದುಪಡಿ, ಪೌತಿ ಖಾತೆಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ನೇರವಾಗಿ ತಹಶೀಲ್ದಾರ್ ಅವರಿಗೆ ಜನತೆ ಸಲ್ಲಿಸಿದರು.
ನಂತರ ಕ್ರಮ ಸಂಖ್ಯೆಯ ಆಧಾರದಲ್ಲಿ ಅರ್ಜಿದಾರರನ್ನು ವೇದಿಕೆಗೆ ಆಹ್ವಾನಿಸಿ ಅಹವಾಲು ಹೇಳಲು ಅವಕಾಶ ಕಲ್ಪಿಸಲಾಗಿತ್ತು. ಅವರವರ ದೂರಿಗೆ ಸಂಬಂಧಿಸಿದ ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿಯನ್ನು ಕರೆದು ಸ್ಪಷ್ಟನೆ ಪಡೆದರು. ಅರ್ಜಿ ವಿಲೇಗೆ ವಿಳಂಬ ಏಕೆ ಆಯಿತು ಎಂದು ನಟೇಶ್ ಸೃಷ್ಟೀಕರಣ ಕೇಳಿದರು. ಖಡಕ್ ಎಚ್ಚರಿಕೆ ಸಹ ನೀಡಿದರು.
ಆಯಾ ಅರ್ಜಿಯ ಮಹತ್ವ ನೋಡಿ ಪರಿಹರಿಸಲು ನಿಗದಿತ ಕಾಲಾವಕಾಶ ನೀಡಲಾಯಿತು. ಸಮರ್ಪಕ ಉತ್ತರ ನೀಡದ ಗ್ರಾಮ ಲೆಕ್ಕಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಟೇಶ್, ಇಂದು ದೋಷಯುಕ್ತ ಸುಮಾರು 267 ಪಹಣಿ ತಿದ್ದುಪಡಿಗೆ ಅರ್ಜಿಗಳು ಬಂದಿದ್ದು, ಇವುಗಳಲ್ಲಿ ಶೇ 85ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಅಲ್ಲದೆ ಸಂಧ್ಯಾ ಸುರಕ್ಷಾ, ವಿಧವಾ ಮಾಸಿಕ ವೇತನಗಳ ಬಗ್ಗೆ ಪರಿಶೀಲನೆ ನಡೆಸಿ ತಕ್ಷಣ ಅವುಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಬೇಕು ಎಂದು ಕಂದಾಯ ನಿರೀಕ್ಷರಿಗೆ ಹಾಗೂ ಸಂಬಂಧಪಟ್ಟ ಆಯಾ ವೃತ್ತದ ಗ್ರಾಮಲೆಕ್ಕಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು. ಜಿ.ಪಂ. ಸದಸ್ಯ ಮಾಡಾಳು ಎಂ.ಎಸ್.ವಿ. ಸ್ವಾಮಿ, ನಾಡಕಚೇರಿ ಉಪತಹಶೀಲ್ದಾರ್ ಗುರುಸ್ವಾಮಿ, ಕಣಕಟ್ಟೆ ವೃತ್ತದ ಗ್ರಾಮಲೆಕ್ಕಾಧಿಕಾರಿ ಮೋಹನ್ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.