ADVERTISEMENT

ಕಬ್ಬು ಬೆಂಕಿಗೆ ಆಹುತಿ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 5:25 IST
Last Updated 17 ಜನವರಿ 2012, 5:25 IST
ಕಬ್ಬು ಬೆಂಕಿಗೆ ಆಹುತಿ: ಅಪಾರ ಹಾನಿ
ಕಬ್ಬು ಬೆಂಕಿಗೆ ಆಹುತಿ: ಅಪಾರ ಹಾನಿ   

ಹಳೇಬೀಡು: ಬೆಂಕಿ ಆಕಸ್ಮಿಕದಿಂದ ಕಬ್ಬಿನ ಬೆಳೆ ನಾಶವಾಗಿರುವ ಘಟನೆ ಪಂಡಿತನಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಮುದ್ದಮ್ಮ ಎಂಬುವರಿಗೆ ಸೇರಿದ 2.32 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬು ಕಟಾವಿಗೆ ಬಂದಿದ್ದರಿಂದ ಉತ್ತಮ ಬೆಲೆ ನಿರೀಕ್ಷಿಸಲಾಗಿತ್ತು. ಆದರೆ ಕಬ್ಬಿಗೆ ಬೆಂಕಿ ಎಲ್ಲವೂ ಸುಟ್ಟು ಹೋಗಿರುವುದರಿಂದ ಮುದ್ದಮ್ಮ ಚಿಂತಕ್ರಾಂತರಾಗಿದ್ದಾರೆ.

ವರ್ಷಪೂರ್ತಿ ಶ್ರಮಪಟ್ಟು ಹಗಲು ರಾತ್ರಿ ಎನ್ನದೆ ನೀರು ಹರಿಸಿ ಬೆಳೆಸಿದ ಕಬ್ಬು ಕ್ಷಣಾರ್ಧದಲ್ಲಿ ಬೆಂಕಿ ಕೆನ್ನಾಲಿಗೆಗೆ ತುತ್ತಾಗಿ ನಾಶವಾಗಿದೆ. ಸಾಲ ಮಾಡಿ ಬೆಳೆ ಮಾಡಿದ ರೈತರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ಗ್ರಾಮಕ್ಕೆ ಎರಡೂ ಕಡೆ ಸಂಪರ್ಕ ರಸ್ತೆ ಇದ್ದರೂ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲದೆ ಇರುವುದರಿಂದ ಬೇಲೂರಿನಿಂದ ಅಗ್ನಿಶಾಮಕ ವಾಹನ ಗ್ರಾಮಕ್ಕೆ ಸಕಾಲಕ್ಕೆ ತಲುಪಲು ಸಾಧ್ಯವಾಗಲಿಲ್ಲ. ರಸ್ತೆಯಲ್ಲಿ ನೀರು ನಿಂತ ಸ್ಥಳದಲ್ಲಿ ವಾಹನ ಹೂತುಕೊಂಡು ಗ್ರಾಮಸ್ಥರು ಹಾಗೂ ಅಗ್ನಶಾಮಕ ಸಿಬ್ಬಂದಿ ಕಷ್ಟ ಅನುಭವಿಸಿದರು.
 
ಬೆಂಕಿ ತಗುಲಿದ ಜಮೀನಿಗೆ ವಾಹನ ತಲುಪುವ ವೇಳೆಗೆ ಕಬ್ಬಿನ ಬೆಳೆ ನಾಶವಾಗಿತ್ತು. ಅಷ್ಟರಲ್ಲಿ ಗ್ರಾಮಸ್ಥರು ಪಕ್ಕದ ಜಮೀನುಗಳಿಗೆ ಬೆಂಕಿ ಆವರಿಸಲು ಅವಕಾಶ ನೀಡಲಿಲ್ಲ. ಮುದ್ದಮ್ಮ ಅವರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.