ADVERTISEMENT

ಕಳೆ ನಾಶಕ್ಕೆ ಅಜೋಲಾ ಬ್ರಹ್ಮಾಸ್ತ್ರ!

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 5:05 IST
Last Updated 31 ಆಗಸ್ಟ್ 2011, 5:05 IST
ಕಳೆ ನಾಶಕ್ಕೆ ಅಜೋಲಾ ಬ್ರಹ್ಮಾಸ್ತ್ರ!
ಕಳೆ ನಾಶಕ್ಕೆ ಅಜೋಲಾ ಬ್ರಹ್ಮಾಸ್ತ್ರ!   

ಸಕಲೇಶಪುರ: ಬತ್ತದ ಪೈರಿನ ನಡುವೆ ಅಜೋಲಾ ಬೆಳೆಯುವುದರಿಂದ ಉತ್ಪಾದನಾ ವೆಚ್ಚ  ಕಡಿಮೆಯಾಗುವುದರ ಜತೆಗೆ ಉತ್ತಮ ಇಳುವರಿ ಸಾಧ್ಯ ಎಂಬುದನ್ನು  ಕೃಷಿ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ಕೆಲವು ರೈತರ ಗದ್ದೆಗಳಲ್ಲಿ ಪ್ರಾಯೋಗಿ ಕವಾಗಿ ಮಾಡಿ ತೋರಿಸಿದ್ದಾರೆ.

ಬತ್ತ ನಾಟಿ ಮಾಡಿದ ಒಂದು ತಿಂಗಳೊಳಗೆ ಗದ್ದೆಯಲ್ಲಿ ಒಂದು ಕೆ.ಜಿ.ಯಷ್ಟು ಅಜೋಲಾವನ್ನು ಅಲ್ಲಲ್ಲಿ ಹಾಕುವುದರಿಂದ ಪೈರಿನ ನಡುವೆ ಸಂಪೂರ್ಣವಾಗಿ ಬೆಳೆಬಲ್ಲದು. ಮಣ್ಣಿಗೆ ಬೆಳು ಬೀಳುವುದನ್ನು ತಡೆಯುತ್ತದೆ. ಇದರಿಂದ ಶೇ 80 ರಷ್ಟು ಕಳೆ ತಡೆಯಬಹುದು. ವಾತಾವರಣದಲ್ಲಿ ಇರುವ ಸಾರಜನಕವನ್ನು ಹೀರಿಕೊಂಡು ಸ್ಥಿರೀಕರಣ ಮಾಡುವುದರಿಂದ ಎಕರೆಯೊಂದಕ್ಕೆ 50 ಕೆ.ಜಿ.ಯಷ್ಟು ಯೂರಿಯಾ ಗೊಬ್ಬರ ಉಳಿಸಬಹುದು. ಬತ್ತ ಕಟಾವಿನ ಹಂತಕ್ಕೆ ಬರುವಷ್ಟರಲ್ಲಿ ಸರಿಸುಮಾರು 2 ಟನ್ ಸಾವಯವ ಗೊಬ್ಬರದ ರೂಪದಲ್ಲಿ ಅಜೋಲಾ ಉತ್ಪಾದನೆಯಾಗುತ್ತದೆ. ಇಷ್ಟೇ ಅಲ್ಲ ಈ ರೀತಿ ಉತ್ಪಾದನೆ ಆಗುವ ಅಜೋಲಾವನ್ನು ದಿನಕ್ಕೆ ಅರ್ಧ ಕೆ.ಜಿಯಂತೆ ಹಸುವಿಗೆ ತಿನ್ನಿಸಿದರೆ ಹಾಲಿನ ಗುಣಮಟ್ಟ ಹಾಗೂ ಇಳುವರಿ  ಹೆಚ್ಚಾಗುವುದರ ಜತೆಗೆ ಹಿಂಡಿಯ ಖರ್ಚು ಉಳಿತಾಯ ಮಾಡಬಹುದು ಎಂದರು ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೀಶ್.

ಒಂದು ಎಕರೆ ಪ್ರದೇಶದಲ್ಲಿ ಅಜೋಲಾ ಬೆಳೆಯುವುದರಿಂದ, ಒಂದು ಚೀಲ ಯೂರಿಯಾ ಮಾರುಕಟ್ಟೆ ದರದಲ್ಲಿ 280 ರೂಪಾಯಿ, ಕಳೆ ತೆಗೆಯುವುದಕ್ಕೆ ಖರ್ಚಾಗುವ 500 ರೂಪಾಯಿ ಹಾಗೂ ಹಿಂಡಿಗಾಗಿ ಖರ್ಚು ಮಾಡುವ 500 ರೂಪಾಯಿ ಉಳಿತಾಯ ಆಗುತ್ತದೆ. ಜತೆಗೆ ಕಟಾವಿನ ಹಂತದಲ್ಲಿ ಎರಡು ಟನ್ ಸಾವಯವ ಗೊಬ್ಬರವನ್ನು ಖರ್ಚಿಲ್ಲದೆ ಉತ್ಪಾದನೆ ಮಾಡಿಕೊಳ್ಳಬಹುದು.

ಕೃಷಿ ಇಲಾಖೆ ತಾಲ್ಲೂಕಿನಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಅಜೋಲಾ ಬೆಳೆಯಲು ಉತ್ತೇಜಿಸಲಾಗಿದೆ. ಅದರಲ್ಲಿ ಮಡ್ಡನಕೆರೆ ಗ್ರಾಮದ ಧರ್ಮ ಪ್ರಕಾಶ್, ಅಂಜುಗೋಡನಹಳ್ಳಿಯ ನರೇಶ್, ಕಿರುಗುಣಸೆ ಗ್ರಾಮದ ಕುಮಾರ್, ಬಾಚಹಳ್ಳಿ ಗ್ರಾಮದ ಲೋಕೇಶ್, ಯಡೇಹಳ್ಳಿ ಗ್ರಾಮದ ವೈ.ಸಿ.ರುದ್ರಪ್ಪ ಸೇರಿದಂತೆ ಇನ್ನೂ ಹಲವು ಪ್ರಗತಿಪರ ರೈತರ ಗದ್ದೆಗಳಲ್ಲಿ ಬೆಳೆಯಲಾಗಿದೆ.

ಅಜೋಲಾವನ್ನು ರೈತರಿಗೆ ಪರಿಚಯಿಸುವ ಸಲುವಾಗಿ ರಾಜ್ಯದಲ್ಲಿಯೇ ಪ್ರಪ್ರಥಮ ಅಜೋಲಾ ಬೆಳೆ ಕ್ಷೇತ್ರೋತ್ಸವವನ್ನು ತಾಲ್ಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ಕಳೆದ ವರ್ಷ ಹಮ್ಮಿಕೊಳ್ಳಲಾಗಿತ್ತು. ಇದರಿಂದ ಉತ್ತೇಜಿತರಾಗಿ ಅಜೋಲ ಬೆಳೆಯುವುದಕ್ಕೆ ಮುಂದಾಗಿರುವುದು ಒಂದು ಒಳ್ಳೆಯ ಬೆಳವಣಿಗೆ ಎಂದು ಯಡೇಹಳ್ಳಿಯ ಪ್ರಗತಿಪರ ರೈತ ವೈ.ಸಿ. ರುದ್ರಪ್ಪ ನುಡಿಯುತ್ತಾರೆ.

ಅಜೋಲಾ ಬೆಳೆಯಲು ಆಸಕ್ತಿ ಇರುವ ರೈತರಿಗೆ ಕೃಷಿ ಇಲಾಖೆ ಒಂದು ಹಿಡಿ ಅಜೋಲಾವನ್ನು ಉಚಿತವಾಗಿ ನೀಡುತ್ತಿದೆ ಎಂದರು  ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೀಶ್ ಮನವಿ ಮಾಡಿದ್ದಾರೆ. ಆಸಕ್ತ ರೈತರು ದೂರ ವಾಣಿ 9448238049/ 9481 667279/ 94800 78455. ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.