ಸಕಲೇಶಪುರ: ಕಾಡಾನೆ ಹಾವಳಿಯಿಂದ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಭಯದಲ್ಲಿ ಬದುಕುವಂತಾಗಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಹಾಗೂ ಹೋಬಳಿ ಬೆಳೆಗಾರ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು. ನಿತ್ಯ ಕಾಡಾನೆಗಳ ದಾಂದಲೆಯಿಂದ ಪ್ರಾಣ, ಬೆಳೆ ಹಾಗೂ ಆಸ್ತಿ ನಷ್ಟವಾಗುತ್ತಿದೆ. ಇದನ್ನು ತಡೆಯಬೇಕು. ಒಂದು ದಶಕದಿಂದ ಸಮಸ್ಯೆ ಉಲ್ಬಣಿಸುತ್ತಿದೆ. ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹೇಳಿದರು.
10 ವರ್ಷಗಳಿಂದ ಈಚೆಗೆ ಕಾಡಾನೆ ದಾಳಿಗೆ 20ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. 100ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ಕಾಫಿ, ಅಡಿಕೆ, ತೆಂಗು ಮರಗಳು ಹಾನಿಗೊಂಡಿವೆ ಎಂದು ದೂರಿದರು. ‘ತೆಂಗಿನ ಮರಗಳನ್ನು ಬುಡಸಮೇತ ಕಿತ್ತು ಭಾರಿ ನಷ್ಟ ಉಂಟು ಮಾಡುತ್ತಿವೆ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಬಾಳ್ಳು ದಿನೇಶ್ ಸಮಸ್ಯೆ ವಿವರಿಸಿದರು.
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಸಿ.ಎಸ್.ಮಹೇಶ್, ‘ಕಾಡಾನೆಗಳಿಂದ ತಮ್ಮ ತೋಟಗಳ ಒಳಗೆ ಮಾಲೀಕರು, ಕಾರ್ಮಿಕರು ಹೋಗದ ಸ್ಥಿತಿಯಿದೆ. ಸೋಲಾರ್ ಬೇಲಿ, ಕಂದಕ ನಿರ್ಮಾಣ ಪರಿಹಾರ ಅಲ್ಲ. ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾ ಅಧ್ಯಕ್ಷ ಮನು ಕುಮಾರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷ ಶೋಭಾ ಕೆಂಪೇಗೌಡ, ಬಿಜೆಪಿಯ ನೇತ್ರಾ ಮಂಜುನಾಥ್, ಕಾಫಿ ಬೆಳೆಗಾರ ಬಾಳ್ಳು ಬಸವಣ್ಣ, ಕ್ಯಾನಹಳ್ಳಿ ಸುಬ್ರಹ್ಮಣ್ಯ ಇತರ ಬೆಳೆಗಾರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.