ADVERTISEMENT

ಕಾರ್ತಿಕ ಪೂಜೆಗೆ ಕಾಲಭೈರವೇಶ್ವರ ಸಜ್ಜು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 8:55 IST
Last Updated 16 ಅಕ್ಟೋಬರ್ 2011, 8:55 IST

ಬಾಣಾವರ(ಮನಕತ್ತೂರು): ಪ್ರತಿನಿತ್ಯ ನೂರಾರು ಭಕ್ತರಿಂದ ಗಿಜುಗುಡುತ್ತಿರುವ ಮನಕತ್ತೂರಿನ ಕಾಲಭೈರವೇಶ್ವರ ದೇವಾಲಯ ಚೋಳರ ಕಾಲದಲ್ಲಿ ಪ್ರತಿಷ್ಠಾಪಿಸಲಾದ ದೇವಾಲಯ. ಸಾವಿರಾರು ವರ್ಷ ಇತಿಹಾಸವಿರುವ ಈ ದೇವಾಲಯ ಕನ್ನಡಿಗರ ಸಂಸ್ಕೃತಿಯ ಪ್ರತಿಕವಾಗಿ ಉಳಿದಿದೆ.

ಬಾಣಾವರದಿಂದ 3 ಕಿ.ಮೀ ದೂರದ ಮನಕತ್ತೂರು ಗ್ರಾಮದ ಹಿಂದಿನ ಹೆಸರು `ಮಾನಕಾಯುವ ಊರು~. ಹಿಂದೆ ರಾಮ ಲಕ್ಷ್ಮಣರು ವನವಾಸ ಸಮಯದಲ್ಲಿ ಈ ಗ್ರಾಮಕ್ಕೆ ಬಂದಾಗ ಅವರಲ್ಲಿ ಮನಸ್ಥಾಪ ಉಂಟಾಗಿ ಶ್ರೀರಾಮ ಇಲ್ಲಿನ ಕಾಲಭೈರವೇಶ್ವರನಿಗೆ ಅರ್ಚನೆ ಮಾಡಿ ಮುಂದೆ ಬಾಣಾವರದತ್ತ ಸಾಗಿದರು ಎಂಬ ನಂಬಿಕೆ ಇದೆ.

ಚೋಳರ ಕಾಲದಲ್ಲಿ ಮಾನವತಿ ಪಟ್ಟಣ ಮತ್ತು ಹೇಮಾವತಿ ಪಟ್ಟಣದ ರಾಜಧಾನಿ ಮನಕ ತ್ತೂರು ಆಗಿದ್ದು ಈಗಿನ ವಿಷ್ಣುಸಮುದ್ರ ಈ ಪಟ್ಟಣಗಳ ಕೊಂಡಿಯಾಗಿತ್ತು.

ಪುರಾತನ ಕಾಲದಲ್ಲಿ ಕೆರೆ ಅಂಗಳದಲ್ಲಿ ಹಾಳಾಗಿದ್ದ ಮೂರ್ತಿಯನ್ನು ತಂದು ಕೆರೆ ಗೋಡು ರಂಗಾಪುರದ ಮೊದಲನೇ ಪರದೇಶಿ ಕೇಂದ್ರ ಸ್ವಾಮಿ ಇಲ್ಲೇ ಇರುವ ಕಲ್ಲುಗಳಿಂದ ಗರ್ಭಗುಡಿ ಕಟ್ಟಿ ಕಾಲಭೈರವನನ್ನು ಪ್ರತಿಷ್ಠಾಪಿಸಿ ದರು ಎನ್ನುತ್ತದೆ ಇತಿಹಾಸ. ಈ ಕಥೆಗೆ ಸಾಕ್ಷಿಯೆಂಬಂತೆ ಗರ್ಭಗುಡಿಯ ಹಿಂದೆ ಈ ಹೇಳಿಕೆಗೆ ಪೂರಕವಾದ ಚಿತ್ರಗಳನ್ನು ಕೆತ್ತಲಾ ಗಿದೆ. ಗರ್ಭಗುಡಿಯ ಹಿಂದೆ ಸ್ವಾಮೀಜಿ, ಚೇಳು, ಲಿಂಗದ ಮಾಲೆ, ಹಸುಹಾಲು ಕರೆಯುವ ಚಿತ್ರಗಳನ್ನು ಕೆತ್ತಲಾಗಿದೆ. ದೇವಾಲಯದ ವೈಶಿಷ್ಟ್ಯವೆಂದರೆ ಇಲ್ಲಿನ ಕಾಲಭೈರವೇಶ್ವರ ದಕ್ಷಿಣದ ಕಡೆ ಮುಖಮಾಡಿ ಹಸನ್ಮುಖನಾಗಿ ನಿಂತಿರುವ ಆಕರ್ಷಕ ಭಂಗಿ.

ದೇವಾಲಯ ತಳಭಾಗದಲ್ಲಿ ನಿಧಿ ನಿಕ್ಷೇಪಗಳಿದ್ದು, ಅದನ್ನು 7 ಅಡಿ ಕಾಳಿಂಗ ಸರ್ಪಗಳು ಕಾಯುತ್ತಿವೆ ಎಂಬ ನಂಬಿಕೆಗೆ ಇಂಬು ಕೊಡುವಂತೆ ಗರ್ಭಗುಡಿ ಗೋಡೆಯಲ್ಲಿ ಸರ್ಪವನ್ನು ಕೆತ್ತಲಾಗಿದೆ. ದೇವಾಲಯದ ಒಳಗೆ ತಿರುಮಲೇಶ್ವರ ದೇವಾಲಯ, ಗರುಡಗಂಬ, ಹಿಂಭಾಗದಲ್ಲಿ ಕೆಂಚರಾಯ ಸ್ವಾಮಿ, ಮಜ್ಜನ ಬಾವಿ, ಗಣಪತಿ, ಬಸವಣ್ಣ, ವೀರಭದ್ರಸ್ವಾಮಿ, ನವಗ್ರಹಗಳು, ಏಳು ಕೋಟಿ ಮೈಲಾರಲಿಂಗೇಶ್ವರ ಮತ್ತು ಸುಮಾರು 8 ಅಡಿ ಎತ್ತರದ ಆಂಜನೇಯ ಸ್ವಾಮಿ ದೇವಾಲಯಗಳಿವೆ. ದೇವಾಲಯದ ಒಳಗೆ ಇರುವ ಮಜ್ಜನ ಬಾವಿ ಯಾವತ್ತೂ ಬತ್ತಿಲ್ಲ. ಈ ಬಾವಿ ನೀರು ತೊಂದರೆ ಇರುವ ಜನರು ಮೈಮೇಲೆ 3 ಬಿಂದಿಗೆ ಸುರಿದು ಕೊಂಡರೆ ಅವರ ಸಂಕಷ್ಟ ನಿವಾರಣೆ ಆಗುತ್ತದೆ ಎಂಬುದು ಭಕ್ತರ ನಂಬಿಕೆ.

ಇತ್ತೀಚೆಗೆ ದೇವಾಲಯ ಟ್ರಸ್ಟ್ 81*53 ಅಡಿ ವಿಸ್ತಾರದ, ಒಮ್ಮೆಗೆ ಸುಮಾರು 500 ಜನ ಪ್ರಸಾದ ಸ್ವೀಕರಿಸುವ ಪ್ರಸಾದ ನಿಲಯ ಮತ್ತು 76*79ರಷ್ಟು ದೊಡ್ಡದಾದ ಸಭಾಂಗಣ ಕಟ್ಟಿಸಿ ಪ್ರತಿ ಅಮಾವಸ್ಯೆ ಮತ್ತು ಹುಣ್ಣಿಮೆಯಂದು ವಿಶೇಷ ಪೂಜೆ ಏರ್ಪಡಿಸಿ ಅನ್ನಸಂತರ್ಪಣೆ ನಡೆತಯುತ್ತದೆ. ಶ್ರಾವಣ ಮಾಸ ಮತ್ತು ಕಾರ್ತಿಕ ಮಾಸಗಳಲ್ಲಿ ಪ್ರತಿದಿನ ವಿಶೇಷ ಪೂಜಾಕಾರ್ಯ ನಡೆಯುತ್ತದೆ. ಶಿವರಾತ್ರಿ ಮುಗಿದ 10ನೇ ದಿನ ಜಾತ್ರಾ ಮಹೋತ್ಸವ ನಡೆಯುತ್ತದೆ.

ದಿನೇ ದಿನೇ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಭಕ್ತರ ಅನುಕೂಲಕ್ಕಾಗಿ ಶೌಚಾಲಯ, ಸ್ನಾನದ ಮನೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕ ವಾಗಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ದೇವಾಲಯ ಟ್ರಸ್ಟ್‌ನ ಮಹಾಲಿಂ ಗಪ್ಪ, ಚಂದ್ರಶೇಖರ್, ನಾಗರಾಜು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.