ಜಾವಗಲ್: ಹೋಬಳಿಯ ಎಲ್ಲ ಗ್ರಾಮಗಳಿಗೆ ಮೊದಲ ಹಂತದ ಯಗಚಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ತ್ವರಿತವಾಗಿ ಮಾಡುವಂತೆ ಶಾಸಕ ರುದ್ರೇಶಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಹೋಬಳಿಯ ಬರ ಪರಿಹಾರ ಕಾಮಗಾರಿ ಪರಿಶೀಲನೆಯ ಅಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಗೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕುಮಾರ್ ನಾಯಕ್, ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್, ಜಿಲ್ಲಾ ಪಂಚಾಯಿತಿ ಅಧಿಕಾರಿ ವೆಂಕಟಾದ್ರಿ ಮತ್ತಿತರ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಮಾತನಾಡಿ, ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಕಾಮಗಾರಿ ವಿಳಂಬ ಮಾಡದೆ ಸಮರೋಪಾದಿಯಲ್ಲ ಕಾಮಗಾರಿ ಮುಗಿಸಿ ಸಮಸ್ಯೆ ನಿವಾರಿಸಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ಮಾತನಾಡಿ, ಬರ ಸಮಸ್ಯೆ ನಿವಾರಣೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹಾಸನ ಮತ್ತು ಸಕಲೇಶಪುರ ಉಪ ವಿಭಾಗಾಧಿ ಕಾರಿಗಳಾದ ಜಗದೀಶ್, ಪಲ್ಲವಿ ಆಕುರಾತಿ, ಅರಸೀಕೆರೆ ತಹಶೀಲ್ದಾರ್ ವರಪ್ರಸಾದ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್, ಎಂಜಿನಿಯರ್ಗಳಾದ ವಿಜಯಕುಮಾರ್, ರಾಮಚಂದ್ರ, ಕಣ್ಮಣಿ, ಬಸವರಾಜು ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ, ಅಧಿಕಾರಿಗಳಾ ಕೆಂಚಪ್ಪ , ನಳಿನಾಂಬಿಕಾ ಮತ್ತಿತರರು ಇದ್ದರು.
ಉದ್ಯೋಗ ಖಾತ್ರಿ ಪ್ರಗತಿ ಪರಿಶೀಲನೆ
ಹಿರೀಸಾವೆ: ಹೋಬಳಿಯಲ್ಲಿ ಬರ ಪರಿಹಾರ ಯೋಜನೆಯಲ್ಲಿ ನಡೆದಿರುವ ಕುಡಿಯುವ ನೀರು ಸರಬರಾಜು ಸೌಲಭ್ಯ ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿಯಲ್ಲಿ ನಡೆದಿರುವ ಕಾಮಗಾರಿ ಗಳನ್ನು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕುಮಾರ್ನಾಯಕ್ ಸೋಮವಾರ ಪರಿಶೀಲಿಸಿದದರು. ಈ ವೇಳೆ ಅಧಿಕಾರಿಗಳು ಜನಪ್ರತಿನಿಧಿಗಳು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ಹಿರೀಸಾವೆಯ ಹೆಬ್ಬಾರಮ್ಮ ದೇವಸ್ಥಾನದ ಬಳಿ ಕಿರು ನೀರು ಸರಬರಾಜಿನ ಬೋರ್ವೆಲ್, ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣ ಮಾಡಿರುವ ತಡೆಗೊಡೆ, ಸೋರೆಕಾಯಿಪುರದಲ್ಲಿ ಹೊಸದಾಗಿ ಕೊರೆಸಿರುವ ಕೊಳವೆ ಬಾವಿ, ಶಾಲೆಯಲ್ಲಿ ನಡೆಯುತ್ತಿರುವ ಅಕ್ಷರ ದಾಸೋಹ, ದೊಂಬರ ಕಾಲೊನಿಯ ಕುಡಿಯುವ ನೀರಿನ ವ್ಯವಸ್ಥೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಯಾಗದ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುವಂತೆ ಸೂಚನೆ ನೀಡಲಾಗುವುದು. ಕೈಪಂಪ್ಗಳನ್ನು ದುರಸ್ತಿ ಮಾಡಿಸಲು ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.