ADVERTISEMENT

ಕೋಡಿಮಠ: ಕೋರೈಸಿದ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 7:08 IST
Last Updated 5 ಡಿಸೆಂಬರ್ 2013, 7:08 IST

ಅರಸೀಕೆರೆ: ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.

ಅಂದು ಮಧ್ಯಾಹ್ನದಿಂದಲೇ ಕೋಡಿಮಠದಲ್ಲಿ ಜನ ಜಂಗುಳಿ ನೆರೆದಿತ್ತು. ಕೋಡಿಮಠ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ಹಾಗೂ ಭಕ್ತಾದಿಗಳು ಲಕ್ಷ ದೀಪೋತ್ಸವದಲ್ಲಿ ತೊಡಗಿಕೊಂಡಿದ್ದರು.

ಸಂಜೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮಠದ ಕತೃ ಗದ್ದುಗೆ ಮುಂಭಾಗದಲ್ಲಿ  ಇಡಲಾಗಿದ್ದ ಹಣತೆಗಳನ್ನು ಹಚ್ಚುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. 

ನಂತರ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪರಿಶುದ್ಧ ಭಕ್ತಿ ಹಾಗೂ ನಿರ್ಮಲ ಮನಸ್ಸಿನಿಂದ ಮಾಡುವ ಧ್ಯಾನ ಬದುಕಿನಲ್ಲಿ ಶಾಂತಿ ಮೂಡುವಂತೆ ಮಾಡುತ್ತದೆ. ಮನಸ್ಸಿನ ದುಗುಡ ಅಂಧಶ್ರದ್ಧೆ ಅಜ್ಞಾನ ದೂರವಾಗಿ ಜ್ಞಾನದ ಸೊಡರು ಬೆಳಗುವ ಮೂಲಕ ಜೀವನ ಹಸನುಗೊಳ್ಳಬೇಕು ಎಂದು ಹೇಳಿದರು.
ಚಲನಚಿತ್ರ ನಟ ಎಸ್‌. ದೊಡ್ಡಣ್ಣ ಮಾತನಾಡಿದರು. ಸಕಲೇಶಪುರ ಆನೆಮಹಲ್‌ ಮೌಲ್ವಿ ಇಬ್ರಾಹಿಂ ಮುಸಲಿಯಾರ್‌, ಅರಸೀಕೆರೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಬಿ.ಕೆ. ಭಾರತಿ ಧರ್ಮ ಸಂದೇಶ ನೀಡಿದರು.

ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಜಾಜೂರು ಶಿರಡಿ ಸಾಯಿಬಾಬಾ ವೈದ್ಯಕೀಯ ಚಿಕಿತ್ಸಾಲಯದ ವೈದ್ಯರಾದ ಡಾ.ಎಂ. ಕೃಷ್ಣಮೂರ್ತಿ ಮತ್ತು ಡಾ.ಎಂ. ಉಮೇಶ್‌ ಅವರನ್ನು ಸನ್ಮಾನಿಸಲಾಯಿತು.

ಡಿ.ಎಂ.ಕುರ್ಕೆ ಬೂದಿಹಾಲ್‌ ವಿರಕ್ತ ಮಠದ ರಾಜಶೇಖರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ ಶಿವಾಚಾರ್ಯ ಸ್ವಾಮೀಜಿ, ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಮಹದೇವ ಹೊರಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ನಿವೃತ್ತ ಶಿಕ್ಷಕ ಎಚ್‌.ಪಿ. ಬಸವಲಿಂಗಪ್ಪ, ಎಚ್‌.ಸಿ. ಮಹದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.