ADVERTISEMENT

ಗಣಿ ಲೂಟಿ: ಬಿಎಸ್ಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2011, 6:15 IST
Last Updated 12 ಆಗಸ್ಟ್ 2011, 6:15 IST
ಗಣಿ ಲೂಟಿ: ಬಿಎಸ್ಪಿ ಪ್ರತಿಭಟನೆ
ಗಣಿ ಲೂಟಿ: ಬಿಎಸ್ಪಿ ಪ್ರತಿಭಟನೆ   

ಸಕಲೇಶಪುರ: ರಾಜ್ಯದಲ್ಲಿ ಗಣಿ ಸಂಪತ್ತು ಲೂಟಿ ಮಾಡಿರುವ ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು ಹಾಗೂ ಅಧಿಕಾರಿಗಳನ್ನು ಕೂಡಲೆ  ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿ  ಬಿಎಸ್‌ಪಿ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೆಳಿಗ್ಗೆ 11.30ರ ಸುಮಾರಿಗೆ ಪ್ರವಾಸಿ ಮಂದಿರ ಆವರಣದಿಂದ ರಾಜಬೀದಿ, ವಾಸವಿ ದೇವಸ್ಥಾನ ಬೀದಿಗಳ ಮೂಲಕ ತಾಲ್ಲೂಕು ಕಚೇರಿ ವರೆಗೆ ಅಕ್ರಮ ಗಣಿಗಾರಿಕೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಖಂಡಿಸಿ ಘೋಷಣೆಗಳನ್ನು ಕೂಗಿದರು. ತಾಲ್ಲೂಕು ಕಚೇರಿ ಮಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಬಿ.ಎಸ್.ಪಿ ಜಿಲ್ಲಾ ಅಧ್ಯಕ್ಷ ಎ.ಪಿ.ಅಹಮ್ಮದ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎಸ್. ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಳ್ಳಾರಿ ರೆಡ್ಡಿ ಸಹೋದರರಿಂದ ರಾಜ್ಯ ಸರ್ಕಾರಕ್ಕೆ 60 ಸಾವಿರ ಕೋಟಿಗೂ ಹೆಚ್ಚು ಹಣ ನಷ್ಟವಾಗಿದೆ. ಇದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ನೀಡಿರುವ ಪಟ್ಟಿಯಲ್ಲಿ ಇರುವಂತಹ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲು ಮಾಡಿ ಜೈಲಿಗೆ ಕಳುಹಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಗೌರವ್, ಸ್ಟೀವನ್ ಪ್ರಕಾಶ್, ಜಿಲ್ಲಾ ಮುಖಂಡರಾದ ರಾಧಾಕೃಷ್ಣ, ಲಕ್ಷ್ಮಣ್ ಕೀರ್ತಿ, ಜಿಲ್ಲಾ ಕಾರ್ಯದರ್ಶಿ ವಿಜಯ್‌ಕುಮಾರ್‌ಗೌಡ, ತಾಲ್ಲೂಕು ಅಧ್ಯಕ್ಷ ಹಸೇನಾರ್ ಎ.ಕೆ. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹಾಲಪ್ಪ, ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.