ಹೊಳೆನರಸೀಪುರ: ಗ್ರಾಮದ ಚರಂಡಿ, ತಿಪ್ಪೆ, ರಸ್ತೆ ಬದಿಯಲ್ಲಿ ಬೆಳೆದ ಪಾರ್ಥೇನಿಯಂ, ಕಳ್ಳಿಗಿಡ, ನೀರು ನಿಲ್ಲುವ ಗುಂಡಿಗಳನ್ನು ಈಚೆಗೆ ಸ್ವಚ್ಛಗೊಳಿಸಿದ ಕೀರ್ತಿ ಯುವಕ ಸಂಘದ ಸದಸ್ಯರು ಗಮನ ಸೆಳೆದರು.
ಎರಡೂ ಬದಿಯಲ್ಲೂ ನೀರು ತುಂಬಿ ಗಬ್ಬು ವಾಸನೆ ಬೀರುತ್ತಿದ್ದ ಚರಂಡಿ, ತಿಪ್ಪೆಗುಂಡಿ, ರಸ್ತೆಗಳಲ್ಲಿ ನೀರುನಿಲ್ಲುವ ಗುಂಡಿಗಳನ್ನು ಸ್ವಚ್ಛಗೊಳಿಸಿದರಲ್ಲದೇ, ಪಾರ್ಥೇನಿಯಂ. ಕಳ್ಳಿಗಿಡ ಕಡಿದು ದೂರಕ್ಕೆ ಸಾಗಿಸಿದರು.
ಯುವಕ ಸಂಘದವರು ಗಣೇಶನನ್ನು ಕೂರಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಆದರೆ, ಗ್ರಾಮದಲ್ಲಿ ತುಂಬಿದ ಚರಂಡಿಗಳಿಂದ, ರಸ್ತೆಬದಿಯಲ್ಲಿ ಬೆಳೆದ ಪಾರ್ಥೆನಿಯಂ ಹಾಗೂ ಕಳ್ಳಿಗಿಡಗಳಿಂದ ಸೊಳ್ಳೆಗಳ ಕಾಟವೂ ಹೆಚ್ಚಿತ್ತು. ಇದಕ್ಕೆ ಅವರೇ ಮುಕ್ತಿ ಹಾಡಿದ್ದಾರೆ.
ಕೆ.ಎಂ. ನಾಗರಾಜು, ಕೆ.ಎಂ. ಚಿಕ್ಕಣ್ಣ, ಸತೀಶ್, ವೀರೇಶ್, ಭೀಮ ರಾಜು, ವಸಂತ್, ಚಿಕ್ಕಣ್ಣ, ಧನ್ರಾಜ್, ರಕ್ಷಿತ್, ಸುನಿಲ್, ಸ್ವಾಮಿ ನೃತೃತ್ವದಲ್ಲಿ 30 ಕ್ಕೂ ಹೆಚ್ಚು ಸದಸ್ಯರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೈಕ್ಗೆ ಟಿಪ್ಪರ್ ಡಿಕ್ಕಿ: ಮಹಿಳೆ ಸಾವು
ಪಟ್ಟಣದ ಅರಕಲಗೂಡು ರಸ್ತೆಯ ನಾಗಲಾಪುರ ಸಮೀಪ ಮಣ್ಣುತೆಗೆಯುವ ಹಿಟಾಚಿ ಯಂತ್ರ ಸಾಗಿಸುತ್ತಿದ್ದ ಟಿಪ್ಪರ್ವೊಂದು ಬೈಕಿಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟು ಇತರ ಮೂವರಿಗೆ ಪೆಟ್ಟು ಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಟಿಪ್ಪರ್ ಡಿಕ್ಕಿಹೊಡೆದ ರಬಸಕ್ಕೆ ತೀವ್ರವಾಗಿ ಪೆಟ್ಟುಬಿದ್ದಿದ್ದ ಜಯಲಕ್ಷ್ಮೀ ಎಂಬುವವರು ಹಾಸನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮದ್ಯದಲ್ಲೇ ಮೃತಪಟ್ಟಿದ್ದಾರೆ. ಜಯಶೇಖರ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸ್ನೇಹ ಮತ್ತು ಸಾಗರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಲ್ಇನ್ಸ್ ಪೆಕ್ಟರ್ ಗೋಪಾಲ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಟಿಪ್ಪರ್ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.