ADVERTISEMENT

ಚನ್ನರಾಯಪಟ್ಟಣ ಬಂದ್‌ಗೆ ಉತ್ತಮ ಬೆಂಬಲ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:00 IST
Last Updated 15 ಫೆಬ್ರುವರಿ 2012, 6:00 IST

ಚನ್ನರಾಯಪಟ್ಟಣ: ಪಟ್ಟಣದ ಬಾಗೂರು ರಸ್ತೆಯ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಮಂಗಳವಾರ ಬಂದ್ ಆಚರಿಸಿದವು.

ಬೆಳಿಗ್ಗೆಯಿಂದಲೇ ಬಾಗೂರು ರಸ್ತೆ ಮಧ್ಯೆ ಶಾಮಿಯಾನ ಹಾಕಲಾಯಿತು. ಅಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಸಿ.ಟಿ. ಅಶೋಕ್‌ಕುಮಾರ್, ನಾಗರಿಕ ಟಿ.ಎಸ್. ಪ್ರಕಾಶ್ ಉಪವಾಸ ಸತ್ಯಾಗ್ರಹ ಮುಂದುವ ರೆಸಿದ್ದರು. ರಸ್ತೆ ಬಂದ್ ಅಗಿದ್ದರಿಂದ ವಾಹನಗಳು ಬೇರೆ ಮಾರ್ಗದಲ್ಲಿ ಸಂಚರಿಸಿದವು. ಬಾಗೂರು ರಸ್ತೆಯ ಎಲ್ಲ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಣೆಯಿಂದ ಬೆಳಿಗ್ಗೆಯಿಂದ ಸಂಜೆ 4.30ರ ವರೆಗೆ ಬಾಗಿಲು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದರು. ಉಳಿದ ಬೀದಿಗಳಲ್ಲಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿಗಳ ಬಾಗಿಲು ಮುಚ್ಚಿಸಿದರು.

ಆದರೆ, ಪ್ರತಿಭಟನಾಕಾರರು ಮೆರವ ಣಿಗೆ ನಡೆಸಿದ ನಂತರ ಬಿ.ಎಂ. ರಸ್ತೆ, ಮೈಸೂರು ರಸ್ತೆ, ಬಸ್ ನಿಲ್ದಾಣದ ರಸ್ತೆಯಲ್ಲಿ ಎಂದಿನಂತೆ ಅಂಗಡಿಗಳು ಬಾಗಿಲು ತೆರೆದು ವಹಿವಾಟು ನಡೆಸಿ ದವು. ಶಾಲಾ- ಕಾಲೇಜು, ಬ್ಯಾಂಕ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಬಾಗೂರು ರಸ್ತೆಯಿಂದ ಪ್ರತಿಭಟನಾ ಕಾರರು ತಮಟೆ ಚಳವಳಿ ಆರಂಭಿಸಿ ದರು. ಕೆ.ಆರ್. ವೃತ್ತಕ್ಕೆ ಬರುವಷ್ಟರಲ್ಲಿ ಅವರ ಸಮಸ್ಯೆ ಆಲಿಸಲು ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಸ್ಥಳಕ್ಕೆ ಆಗಮಿಸಿದರು. ಅವರ ವಿರುದ್ಧ ಪ್ರತಿಭ ಟನಾಕಾರರು ಆಕ್ರೋಶ ವ್ಯಕ್ತಪಡಿ ಸಿದರು. `ವ್ಯಾಪಾರಸ್ಥರು, ಸಾರ್ವ ಜನಿಕರು ಚಳವಳಿ ಮಾಡಿದಾಗ ಬಂದು ಮೊಸಳೆ ಕಣ್ಣೀರು ಸುರಿಸುತ್ತೀರಿ. ಉಳಿದಂತೆ ಬಡವರ ಪರ ಕಾಳಜಿ ತೋರುವುದಿಲ್ಲ. ಮಾನವೀಯತೆ ಇಲ್ಲದ ಅಧಿಕಾರಿಗಳೊಂದಿಗೆ ಚರ್ಚಿಸುವ ಅಗತ್ಯ ವಿಲ್ಲ~ ಎಂದು ಸಿಡಿಮಿಡಿಗೊಂಡರು.

ಮೆರವಣಿಗೆ ವೇಳೆ ತಾಲ್ಲೂಕು ಆಡಳಿತ, ಪುರಸಭೆ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆ ಪುರಸಭೆ ಯತ್ತ ಆಗಮಿಸಿತು. ಆ ಸಂದರ್ಭದಲ್ಲಿ ಪುರಸಭೆಯ ಒಳಗೆ ನುಗ್ಗಲು ಜನರನ್ನು  ಪೊಲೀಸರು ಅವಕಾಶ ನೀಡಲಿಲ್ಲ. ಪುನಃ ಚಳವಳಿ ಗಾರರು ಬಾಗೂರು ರಸ್ತೆಯಲ್ಲಿ ಪ್ರತಿಭಟನೆ ಮುಂದುವರೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.