ADVERTISEMENT

ಚಾಲಕನ ಸಮಯಪ್ರಜ್ಞೆ; ತಪ್ಪಿದ ಅಪಘಾತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 12:23 IST
Last Updated 1 ಜೂನ್ 2013, 12:23 IST

ಹಿರೀಸಾವೆ: ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತವನ್ನು ತಪ್ಪಿಸುವ ಮೂಲಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಅಪಾಯದಿಂದ ರಕ್ಷಿಸಿದ ಘಟನೆ ಶುಕ್ರವಾರ ರಾತ್ರಿ ಹಿರೀಸಾವೆ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರು ಕಡೆಯಿಂದ ಅರಕಲಗೂಡು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಹಾಸನ ಕಡೆಯಿಂದ ಬೆಂಗಳೂರಿಗೆ ತೆರಳುತಿದ್ದ ಮರಳು ಲಾರಿಯು ಅಡ್ಡ ಬಂದಿತು.

ಸಂಭವಿಸಬಹುದಾದ ಅಪಾಯ ಅರಿತ ಬಸ್ ಚಾಲಕ ಕೃಷ್ಣೇಗೌಡ ಬಸ್ ಅನ್ನು ರಸ್ತೆಯ ಎಡ ಭಾಗಕ್ಕೆ ತಿರುಗಿಸಲು ಪ್ರಯತ್ನಿಸಿದರೂ ಲಾರಿಯ ಬಲಭಾಗಕ್ಕೆ ಬಸ್ ತಗಲಿತು.

ಆದರೂ ಚಾಲಕ ಹೆದರದೆ ಬಸ್ ಅನ್ನು ರಸ್ತೆ ಪಕ್ಕದ ಹಳ್ಳಕ್ಕೆ ಸುರಕ್ಷಿತವಾಗಿ ಇಳಿಸುವ ಮೂಲಕ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಅಪಾಯದಿಂದ ಕಾಪಾಡಿದ್ದಾನೆ. ಬೆಂಗಳೂರನ್ನು ಸಂಜೆ 4 ಗಂಟೆಗೆ ಬಿಟ್ಟು, 7-30ರ ಸಮಯದಲ್ಲಿ ಹಿರೀಸಾವೆ ಬಳಿ ಬರುತ್ತಿದ್ದಾಗ ಈ ಅಪಘಾತ ನಡೆಯಿತು. ಬಸ್‌ನಲ್ಲಿ ಇದ್ದ 47 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ನಿರ್ವಾಹಕ ಕಾಂತರಾಜು `ಪ್ರಜಾವಾಣಿ'ಗೆ ತಿಳಿಸಿದರು.

ಅಪಘಾತದ ವಿಷಯ ತಿಳಿದ ಹಿರೀಸಾವೆ  ಪೊಲೀಸ್‌ಠಾಣೆಯ ಎಎಸ್‌ಐ ಎಚ್.ಎಂ. ಚಂದ್ರೇಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಇತರೆ ಬಸ್‌ಗಳಿಗೆ ಕಳುಹಿಸಿದ್ದಾರೆ ಮತ್ತು ಅಪಘಾತ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.  

ಜೂನ್ 3ರಂದು  ಆರೋಗ್ಯ ತಪಾಸಣೆ
ಹೊಳೆನರಸೀಪುರ: ಪಟ್ಟಣದ ರೋಟರಿ ಸಂಸ್ಥೆ, ಬೆಂಗಳೂರಿನ ವಿಠ್ಠಲ ಆಸ್ಪತ್ರೆಯ ಸಹಯೋಗದಲ್ಲಿ ಜೂನ್ 3 ರಂದು ಸೋಮವಾರ ಬೆಳಿಗ್ಗೆ 7.30 ರಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದಾರೆ.

ಈ ಶಿಬಿರದಲ್ಲಿ ಹೃದಯ, ಮೂತ್ರಪಿಂಡ, ಪಿತ್ತಕೋಶಗಳ ಕಾರ್ಯವೈಖರಿಯನ್ನು ಪರೀಕ್ಷಿಸಲಾಗುವುದು. ಪಾದಗಳಲ್ಲಿ ನರ ಹಾಗೂ ರಕ್ತ ಸಂಚಾರ, ಹೃದಯ ಬಡಿತದ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎ.ಎಸ್. ರಂಗನಾಥ್ ತಿಳಿಸಿದ್ದಾರೆ. ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬಯಸುವವರು ನಿಗದಿತ ಶುಲ್ಕವನ್ನು ಪಾವತಿಸಿ ರೋಟರಿ ಸಂಸ್ಥೆಯ ಸದಸ್ಯರಲ್ಲಿ ಹೆಸರು ನೋಂದಾಯಿಸಲು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.