ADVERTISEMENT

ಜಾಗಕ್ಕಾಗಿ ಮನವಿ ಸಲ್ಲಿಸಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 5:55 IST
Last Updated 5 ಜನವರಿ 2012, 5:55 IST

ಬೇಲೂರು: ಇಲ್ಲಿನ ಚೆನ್ನಕೇಶವಸ್ವಾಮಿ ದೇವಾಲಯದ ಹಿಂಭಾಗ ಪ್ರವಾಸೋದ್ಯಮ ಇಲಾಖೆ ಖರೀದಿಸಿರುವ ಜಾಗದ ಪೈಕಿ ನಾಲ್ಕು ಎಕೆರೆ ಜಾಗವನ್ನು ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಪುರಸಭೆಗೆ ನೀಡುವಂತೆ ಕೋರಲು ಬುಧವಾರ ನಡೆದ ವಿಶೇಷ ಸಭೆಯಲ್ಲಿ ನಿರ್ಣಯಿಸಲಾಯಿತು.

  ಸಭೆಯಲ್ಲಿ ಮಾತನಾಡಿದ ತೊ.ಚ.ಅನಂತಸುಬ್ಬರಾಯ, ತಾವು ಕಳೆದ ವಾರ ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಪುರಸಭೆಗೆ ದೇವಸ್ಥಾನದ ಹಿಂಭಾಗ 2 ಎಕರೆ ಜಾಗ ನೀಡುವಂತೆ ಕೋರಿದಾಗ ಅವರು ಪ್ರವಾಸಿಗರಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವುದಾದರೆ 4 ಎಕರೆ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಕೊಡುವ ಭರವಸೆ ನೀಡಿದ್ದಾರೆ. ಒಂದು ವೇಳೆ ಜಾಗ ನೀಡಿದರೆ ಅಲ್ಲಿ ಪಾರ್ಕಿಂಗ್ ಸೌಲಭ್ಯ, ಕುಡಿಯುವ ನೀರು, ಶೌಚಾಲಯ, ಉದ್ಯಾನ, ವಿಶ್ರಾಂತಿ ಗೃಹ ನಿರ್ಮಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರದ ಅನುದಾನ, ಎಂ.ಪಿ. ಎಂ.ಎಲ್.ಎ. ಎಂ.ಎಲ್.ಸಿ. ಗ್ರಾಂಟ್ ಪಡೆಯುವ ಉದ್ದೇಶವಿದೆ ಎಂದರು.

  ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ ಹಾಲಿ ದೇವಸ್ಥಾನದ ಮುಂಭಾಗ ಇರುವ ಶೌಚಾಲಯ ವ್ಯವಸ್ಥೆ ಉತ್ತಮವಾಗಿಲ್ಲ. ಪ್ರವಾಸಿಗ ರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಪ್ರಾಚ್ಯವಸ್ತು ಇಲಾಖೆಯ ಶೌಚಾಲಯವನ್ನು ಸಂಜೆ 6 ಗಂಟೆಗೆ  ಬಂದ್ ಮಾಡಲಾಗು ತ್ತಿದೆ. ಈ ಎಲ್ಲ ಅವ್ಯವಸ್ಥೆಯಿಂದಾಗಿ ಪ್ರವಾಸಿಗರು ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜಿ ಸುತ್ತಿದ್ದಾರೆ ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಿ ಎಂದರೆ ಸದಸ್ಯರಾದ ಎಚ್.ಎಂ. ದಯಾನಂದ್, ಬಿ.ಸಿ.ಮಂಜುನಾಥ್, ಎಂ.ಗುರುಪಾದ ಸ್ವಾಮಿ, ಬಿ.ಎಲ್. ಧರ್ಮೇಗೌಡ ಅವರು ಮೊದಲು ಜಾಗ ಪಡೆಯುವ ಬಗ್ಗೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿ ನಂತರ ಈ ಬಗ್ಗೆ ಚರ್ಚೆ ಮಾಡಿ ಎಂದರು.

ಪಟ್ಟಣದ ಮುಖ್ಯರಸ್ತೆ ಹಾಗೂ ದೇವಸ್ಥಾನದ ರಸ್ತೆಯ ಇಕ್ಕೆಲಗಳ ಫುಟ್‌ಪಾತ್‌ಗಳಲ್ಲಿ ಹೂವು, ಹಣ್ಣು, ತರಕಾರಿ ಹಾಗೂ ಮತ್ತಿತರ ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ಐ.ಡಿ.ಎಸ್.ಎಂ.ಟಿ. ವಾಣಿಜ್ಯ ಕಟ್ಟಡದ ಒಳಭಾಗ ಸಣ್ಣ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಕೊಡಲು ಸಹ ವಿಶೇಷ ಸಭೆ ಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಈ ಯೋಜನೆಗೆ ಸುಮಾರು ರೂ.17 ಲಕ್ಷ  ವೆಚ್ಚವಾಗಲಿದ್ದು, ಬಾಡಿಗೆದಾರರಿಂದ ಮುಂಗಡ ಹಣ ಪಡೆದು ಮಳಿಗೆ ನಿರ್ಮಿಸಲಾಗುವುದು. ಈಗ 48 ಜನ ವ್ಯಾಪಾರಿಗಳನ್ನು ಗುರುತಿಸಲಾಗಿದೆ ಎಂದು ಆಧ್ಯಕ್ಷ ತೊ.ಚ.ಅನಂತ ಸುಬ್ಬರಾಯ ತಿಳಿಸಿದರು.

ಸದಸ್ಯ ಬಿ.ಡಿ.ಚನ್ನಕೇಶವ ಮಾತನಾಡಿ ಪಟ್ಟಣದಲ್ಲಿ ಪುರಸಭೆಯ ಆಸ್ತಿ ಎಲ್ಲಿದೆ-ಎಷ್ಟಿದೆ ಎಂಬ ಮಾಹಿತಿ ಇಲ್ಲವಾಗಿದೆ. ಮೂರು ವರ್ಷದ ಹಿಂದೆಯೇ ಈ ಬಗ್ಗೆ ಮಾಹಿತಿ ಕೋರಿದ್ದರೂ ನೀಡಿಲ್ಲ ಎಂದು ಆರೋಪಿಸಿದರು. ಇದಕ್ಕೆ ಸದಸ್ಯ ಬಿ.ಎ.ಜಮಾಲುದ್ದೀನ್ ಧ್ವನಿಗೂಡಿಸಿದರು. ಆಸ್ತಿಗೆ ಸಂಬಂಧಿಸಿದ ದಾಖಲೆ ಪುಸ್ತಕವನ್ನು 1973ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇಲ್ಲಿಯವರೆಗೆ ಅದನ್ನು ತಂದಿಲ್ಲ. ನ್ಯಾಯಾಲಯ ದಿಂದ ವಾಪಸ್ಸು ಪಡೆಯುವ ಬಗ್ಗೆ ಕ್ರಮ ಕೈಗೊಳ್ಳಲಾ ಗುವುದು ಎಂದು ಅನಂತಸುಬ್ಬರಾಯ ಭರವಸೆ ನೀಡಿದರು. ಅಸೆಸ್‌ಮೆಂಟ್ ಅಧಿಕಾರಿ ಗಳು ಪುರಸಭೆಯ ಕನ್‌ಸರ್‌ವೆನ್ಸಿ ರಸ್ತೆ ಹಾಗೂ ಇತರ ಕೆಲ ಜಾಗಗಳನ್ನು ಬೇರೆಯವರಿಗೆ ಖಾತೆ ಮಾಡಿ ಕೊಟ್ಟಿದ್ದಾರೆ. ಈ ಬಗ್ಗೆ ಯಾವು ಕ್ರಮ ಕೈಗೊಳ್ಳುತ್ತೀರಿ ಎಂದು ಸದಸ್ಯ ಜಿ.ಶಾಂತಕುಮಾರ್ ಪ್ರಶ್ನಿಸಿದರು.

ಯಥಾಸ್ಥಿತಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಮೈದಾನದ ಜಾಗದ ವಿಚಾರ ಹೈಕೋರ್ಟ್‌ನಲ್ಲಿರುವುದ ರಿಂದ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ವಕೀಲ ನಟರಾಜ್ ಕಾನೂನು ಸಲಹೆ ನೀಡಿದ್ದಾರೆ. ಆದ್ದರಿಂದ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡುವವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವು ದಿಲ್ಲ ಎಂದು ಸದಸ್ಯ ಎಚ್.ಎಂ.ದಯಾನಂದ್ ಅವರ ಪ್ರಶ್ನೆಗೆ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಸ್ಪಷ್ಟನೆ ನೀಡಿದರು. ಉಪಾಧ್ಯಕ್ಷೆ ಅಮೀನಾ, ಮುಖ್ಯಾಧಿಕಾರಿ ಆರ್. ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.