ADVERTISEMENT

ಜೆಡಿಎಸ್‌ ಶಕ್ತಿಪ್ರದರ್ಶನಕ್ಕೆ ವೇದಿಕೆ ಸಜ್ಜು

ಜೆಡಿಎಸ್‌ ಶಕ್ತಿಪ್ರದರ್ಶನಕ್ಕೆ ವೇದಿಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 10:22 IST
Last Updated 2 ಏಪ್ರಿಲ್ 2018, 10:22 IST

ಹಾಸನ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಶಕ್ತಿಪ್ರದರ್ಶನಕ್ಕೆ ಜೆಡಿಎಸ್‌ ವೇದಿಕೆ ಸಿದ್ದಗೊಂಡಿದೆ.ಜಿಲ್ಲಾ ಕ್ರೀಡಾಂಗಣದಲ್ಲಿ ಏ. 2ರ ಸಂಜೆ 4 ಗಂಟೆಗೆ ನಡೆಯುವ ‘ವಿಕಾಸ ಪರ್ವ’ ಜಿಲ್ಲಾ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಪಿಜಿಆರ್ ಸಿಂಧ್ಯ, ಬಂಡೆಪ್ಪ ಕಾಶಂಪೂರ್‌ ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.

ಭಾನುವಾರ ಸಂಜೆ ಸಂಸದ ಎಚ್‌.ಡಿ.ದೇವೇಗೌಡ, ಶಾಸಕರಾದ ಎಚ್‌.ಎಸ್‌.ಪ್ರಕಾಶ್‌, ಎಚ್‌.ಡಿ.ರೇವಣ್ಣ, ಪಟೇಲ್‌ ಶಿವರಾಂ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸತೀಶ್‌ ಹಾಗೂ ಸ್ಥಳೀಯ ನಾಯಕರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯ ಪರಿಶೀಲಿಸಿ, ಕೆಲವು ಸೂಚನೆ ನೀಡಿದರು.

ಸೋಮವಾರ ಮಧ್ಯಾಹ್ನ 2 ಗಂಟೆಗೆ ಬೈಕ್‌ ರ‍್ಯಾಲಿ ಆಯೋಜಿಸಲಾಗಿದ್ದು, ನಗರದ ಹಾಲಿನ ಡೇರಿ ವೃತ್ತದಿಂದ ಹೊರಡುವ ರ‍್ಯಾಲಿ ಬಿ.ಎಂ. ರಸ್ತೆ ಮೂಲಕ ಎನ್‌.ಆರ್‌.ಸರ್ಕಲ್‌, ಹಳೇ ಬಸ್‌ ನಿಲ್ದಾಣ ರಸ್ತೆ, ಸಾಲಗಾಮೆ ರಸ್ತೆ ಮೂಲಕ ಕ್ರೀಡಾಂಗಣ ತಲುಪಲಿದೆ.

ADVERTISEMENT

‘ಸಮಾವೇಶದಲ್ಲಿ ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೇಂದ್ರ, ರಾಜ್ಯ ಸರ್ಕಾರ ಅಡ್ಡಿಪಡಿಸಿದ ಕಾಮಗಾರಿಗಳ ಬಗ್ಗೆ ಜನರಿಗೆ ತಿಳಿಸಲಾಗುವುದು’ ಎಂದು ಶಾಸಕ ಎಚ್‌.ಡಿ.ರೇವಣ್ಣ ಅವರು ಹೇಳಿದರು.

ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ. ಪ್ರತಿ ತಾಲ್ಲೂಕಿನಿಂದ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.