ADVERTISEMENT

ತಿಂಡಿ ಸೇವಿಸಿ 30 ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 8:35 IST
Last Updated 21 ಜುಲೈ 2012, 8:35 IST

ಹಳ್ಳಿಮೈಸೂರು (ಹೊಳೆನರಸೀಪುರ): ತಿಂಡಿ ತಿಂದು ಅಸ್ವಸ್ಥಗೊಂಡು 30 ವಿದ್ಯಾರ್ಥಿಗಳು ಆಸ್ಪತ್ರೆ ಸೇರಿರುವ ಘಟನೆ ತಾಲ್ಲೂಕಿನ ಹಳ್ಳಿಮೈಸೂರು ಕಸ್ತೂರಿಬಾ ಗಾಂಧಿ ವಸತಿ ಶಾಲೆಯಲ್ಲಿ  ಶುಕ್ರವಾರ ಬೆಳಿಗ್ಗೆ ನಡೆದಿದೆ.

ಹಳ್ಳಿಮೈಸೂರಿನ ಕಸ್ತೂರಿಬಾ ಗಾಂಧಿ ವಸತಿ ಶಾಲೆಯಲ್ಲಿ 82 ವಿದ್ಯಾರ್ಥಿ ಗಳಿದ್ದಾರೆ. ಶುಕ್ರವಾರ ಬೆಳಗಿನ ವ್ಯಾಯಾಮದ ನಂತರ ಮಕ್ಕಳು ತಿಂಡಿ ತಿಂದಿದ್ದಾರೆ. ತಿಂಡಿ ತಿಂದ ಕೆಲ ಸಮಯದ ನಂತರ ಒಬ್ಬರ ನಂತರ ಒಬ್ಬರಂತೆ 30 ವಿದ್ಯಾರ್ಥಿಗಳು ತಲೆ ಸುತ್ತಿ ಬಿದ್ದಿದ್ದಾರೆ. ಅಸ್ವಸ್ಥರನ್ನು ತಕ್ಷಣ ಹಳ್ಳಿ ಮೈಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಮಕ್ಕಳು ತಲೆ ಸುತ್ತು ಹೊಟ್ಟೆ ನೋವಿನಿಂದ ನರಳುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಳ್ಳಿಮೈಸೂರು ಸುತ್ತಲ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೂ ಚಿಕಿತ್ಸೆಗೆ ಸಾಥ್ ನೀಡಿದ್ದಾರೆ

 ಶಾಲೆಯ ನೀರು ಮತ್ತು ಆಹಾರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೆರೆಡು ದಿನಗಳಲ್ಲಿ ವರದಿ ಬರುತ್ತದೆ. ಮಕ್ಕಳು ಅಸ್ವಸ್ಥರಾಗಲು ಕಾರಣ ಏನು ಏಂಬುದು ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
 ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.