
ಹಿರೀಸಾವೆ: ದೇವರಲ್ಲಿ ನಂಬಿಕೆ ಇಡುವ ಮೂಲಕ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಶೃಂಗೇರಿಯ ಶಾರದ ಪೀಠದ ವಿಧುಶೇಖರ ಸ್ವಾಮೀಜಿ ಶುಕ್ರವಾರ ಹೋಬಳಿಯ ಬಾಳಗಂಚಿ ಗ್ರಾಮದಲ್ಲಿ ಹೇಳಿದರು.
ಗ್ರಾಮದಲ್ಲಿ ಪುನರ್ ನಿರ್ಮಾಣ ಮಾಡಿರುವ ಹೊನ್ನಾದೇವಿಯ ದೇವಾಲಯದ ಉದ್ಘಾಟನ ಕಾರ್ಯ ಕ್ರಮದಲ್ಲಿ ಆಶೀರ್ವಚನ ನೀಡಿದರು. ದೇವರ ಅಸ್ತಿತ್ವದ ಬಗ್ಗೆ ಅನುಮಾನ ಬೇಡ. ವಿವೇಕ ಇರುವ ಮಾನವನು, ಉತ್ತಮ ದಾರಿಯಲ್ಲಿ ನಡೆದರೆ, ದೇವರನ್ನು ಕಾಣಬಹುದು ಎಂದರು.
ಬೆಳಿಗ್ಗೆ ಪ್ರತಿಷ್ಠಾಂಗ, ಪೂಜಾಂಗ ಹೋಮಗಳು ಮತ್ತು ವಿವಿಧ ಪೂಜೆಗಳನ್ನು ಮಾಡಲಾಯಿತು. ರೇವತಿ ನಕ್ಷತ್ರಯುಕ್ತ ಸುಮುಹೋರ್ತದಲ್ಲಿ ಶೃಂಗೇರಿಯ ಶಾರದ ಪೀಠದ ಭಾರತೀತೀರ್ಥ ಮಹಾಸ್ವಾಮೀಜಿ ಯವರು ದೇವಾಲಯವನ್ನು ಉದ್ಘಾಟಿಸಿ, ಮೂರ್ತಿಗೆ ಪ್ರಾಣ ಪ್ರತಿಷ್ಠೆ ನೀಡಿ, ದೇವಿಗೆ ಪೂಜೆ ಸಲ್ಲಿಸಿದರು ಮತ್ತು ಆಶೀರ್ವಚನ ನೀಡಿದರು. ಗ್ರಾಮಕ್ಕೆ ಬಂದ ಸ್ವಾಮೀಜಿ ಗಳನ್ನು ಪೂರ್ಣಕುಂಭದೊಂದಿಗೆ ಭಕ್ತರು ಸ್ವಾಗತಿಸಿದರು.
ದೇವಾಲಯದ ಉದ್ಘಾಟನೆ ಪ್ರಯುಕ್ತ ಗುರುವಾರ ಗಣಪತಿ, ನವಗ್ರಹ, ಶಾಂತಿ, ಬಿಂಬಶುದ್ಧಿ ಹೋಮಗಳು ಸೇರಿದಂತೆ ವಿವಿಧ ಪೂಜೆಗಳನ್ನು ಮಾಡಲಾಯಿತು.
ಕಾನೂನು ಹಾಗೂ ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ, ವಿಧಾನ ಪರಿಷತ್ತು ಸದಸ್ಯ ರಾಮಚಂದ್ರೇಗೌಡ, ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಸಚಿವ ಬಿ. ಶಿವರಾಮ್, ಮಾಜಿ ಆಡ್ವೊಕೇಟ್ ಜನರಲ್ ಹಾರನಹಳ್ಳಿ ಆಶೋಕ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯಕುಮಾರ್, ಒಕ್ಕಲಿಗರ ಸಂಘದ ನಿರ್ದೇಶಕ ರಾಮಚಂದ್ರ, ಹಿರೀಸಾವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ. ಗೊಪಾಲಸ್ವಾಮಿ ಸೇರಿದಂತೆ ವಿವಿಧ ಗಣ್ಯರು ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.