ADVERTISEMENT

ನದಿಗೆ ತಡೆಗೋಡೆ ಬೇಡ: ಶಾಸಕ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 6:15 IST
Last Updated 2 ಏಪ್ರಿಲ್ 2013, 6:15 IST

ಹೊಳೆನರಸೀಪುರ: ಏತ ನೀರಾವರಿ ಯೋಜನೆಯಿಂದ ಹಳ್ಳಿಮೈಸೂರು ಹೋಬಳಿಯ ಜನರಿಗೆ ಸಂಪೂರ್ಣ ಉಪಯೋಗವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಕಲಗೂಡು ಶಾಸಕ ಎ.ಮಂಜು ನುಡಿದರು.

ಭಾನುವಾರ ಹಳ್ಳಿಮೈಸೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಹುಚ್ಚನಕೊಪ್ಪಲು 2ನೇ ಹಂತದ ಏತ ನೀರಾವರಿ ನಿರ್ಮಾಣದ ವೇಳೆಯೇ ರಂಗೇನಹಳ್ಳಿ ಏತ ನೀರಾವರಿಗೆ ಹಣ ಬಿಡುಗಡೆ ಆಗಿತ್ತು. ಆದರೆ ಕೆಲವರ ರಾಜಕೀಯ ಕುತಂತ್ರದಿಂದ ಈ ಯೋಜನೆ ಸ್ಥಗಿತ ಗೊಂಡಿತು ಎಂದು ಅಪಾದಿಸಿದರು.      
                                                                                                                                                                               
ಹೋಬಳಿಯಲ್ಲಿ ತಂಬಾಕು ಬೆಳೆಗಾರರು ಹೆಚ್ಚಾಗಿದ್ದಾರೆ. ಇಲ್ಲಿಯೇ ತಂಬಾಕು ಮಂಡಳಿ ಪ್ರಾರಂಭಿಸಲಾಗುತ್ತದೆ. ಇದರಿಂದ ರಾಮನಾಥಪುರಕ್ಕೆ ತಂಬಾಕು ಸಾಗಿಸುವ ಕಷ್ಟ ತಪ್ಪಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಹೇಮಾವತಿ ಅಣೆಕಟ್ಟು ಕಟ್ಟಿಸಿದ್ದರಿಂದ ಈ ಭಾಗದ ಕೃಷಿಗೆ ನೀರು ಒದಗಿದೆ. ಆದರೆ ಜೆಡಿಎಸ್ ಮುಖಂಡರಿಗೆ ಹಳ್ಳಿ ಮೈಸೂರು ಹೋಬಳಿ ಜನರಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಒದಗಿಸಲಿಲ್ಲ. ಆದರೆ ಹಿಂಬಾಲಕ ಗುತ್ತಿಗೆದಾರನಿಗೆ ಅನುಕೂಲ ಕಲ್ಪಿಸಲು ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದಿಂದ ಕೋಟಿ ಕೋಟಿ ಹಣ ಪಡೆದು ಹೇಮಾವತಿ ನದಿಗೆ ತಡೆಗೋಡೆ ನಿರ್ಮಿಸುತ್ತಿದ್ದಾರೆ. ಈ ತಡೆಗೋಡೆ ಅನಗತ್ಯ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಡಿ. ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಪುಟ್ಟೇಗೌಡ, ಕಾಂಗ್ರೆಸ್ ಮುಖಂಡ ಜಾವಗಲ್ ಮಂಜುನಾಥ್, ಅರಕಲಗೂಡು ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಿಗೆರೆ ಬೈರೇಗೌಡ, ಹಳ್ಳಿಮೈಸೂರು ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷ ಸಾಂಬಶಿವಪ್ಪ, ಮುಖಂಡರಾದ ದೊಡ್ಡಮಗ್ಗೆ ರಾಜೇಗೌಡ, ಕಮಲಮ್ಮ ಹಾಗೂ ಪಕ್ಷದ ಚುನಾವಣಾ ವೀಕ್ಷಕ ಸೋಮೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.