ಬೇಲೂರು: ‘ಪಾಶ್ಚಾತ್ಯರು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಆದರೆ, ನಾವು ನಮ್ಮ ಸಂಸ್ಕೃತಿಯನ್ನು ಕಡೆಗಣಿಸುತ್ತಿದ್ದೇವೆ’ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ವಿಷಾದ ವ್ಯಕ್ತಪಡಿಸಿದರು. ಗುರುಪೂರ್ಣಿಮೆ ಅಂಗವಾಗಿ ಇಲ್ಲಿನ ಶಂಕರಮಠದಲ್ಲಿ ಗುರುವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
‘ವಿದೇಶಿಗರು ನಮ್ಮ ಭಾಷೆಯನ್ನು ಇಲ್ಲಿನ ಸಂಸ್ಕಾರ, ಸಂಸ್ಕೃತಿಯನ್ನು ಕಲಿಯಲು ಇಲ್ಲಿಗೆ ಬರುತ್ತಿದ್ದಾರೆ. ಆದರೆ, ನಾವು ನಮ್ಮ ಭಾಷೆಯನ್ನು ದೂಷಿಸುತ್ತ ಪಾಶ್ಚಾತ್ಯ ಭಾಷೆಯನ್ನು ಕಲಿಯುವುದರತ್ತ ಆಸಕ್ತಿ ತೋರುತ್ತಿದ್ದೇವೆ.
ಇತ್ತೀಚಿನ ದಿನಗಳಲ್ಲಿ ದೇವಾಲಯಗಳಿಗೆ ಜನರು ಉಡುಗೆ, ತೊಡುಗೆ ಮತ್ತು ಬಾಹ್ಯಸೌಂದರ್ಯದ ತೋರಿಕೆಗಾಗಿ ದೇವಾಲಯಕ್ಕೆ ಬರುತ್ತಿದ್ದಾರೆ. ಸಂಸ್ಕೃತಿಯನ್ನು ಬಿಂಬಿಸಲು ಮತ್ತು ನಮ್ಮ ಸಂಸ್ಕಾರವನ್ನು ಎತ್ತಿಹಿಡಿಯಲು ದೇವಾಲಯಕ್ಕೆ ಬರಬೇಕೇ ವಿನಾ ನಮ್ಮ ಸಂಸ್ಕೃತಿಯನ್ನು ನಾಶಪಡಿಸಲು ಅಲ್ಲ’ ಎಂದು ಹೇಳಿದರು.
ಪೋಷಕರು ತಮ್ಮ, ತಂದೆ ತಾಯಿಯನ್ನು ಗೌರವಿಸುವ ಕೆಲಸವನ್ನು ಮಾಡುತ್ತಿಲ್ಲ. ತಮ್ಮ ಮಕ್ಕಳಿಗೂ ಕಲಿಸುತ್ತಿಲ್ಲ. ಕನ್ನಡ ಭಾಷೆಯಲ್ಲಿಯೇ ಸಂಸ್ಕೃತಿ ಅಡಗಿದೆ. ಸುಂದರ ಕನ್ನಡ ಭಾಷೆಯನ್ನು ಬಿಟ್ಟು ಪಾಶ್ಚಾತ್ಯ ಭಾಷೆಗೆ ಮರುಳಾಗಿ ಅದರ ಹಿಂದೆ ಹೋಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಬ್ರಾಹ್ಮಣ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕೇಶವ, ಗೌರವಾಧ್ಯಕ್ಷ ಮಂಜುನಾಥ್, ಪ್ರಮುಖರಾದ ತೊ.ಚ.ಅನಂತ ಸುಬ್ಬರಾಯ, ರಾಮಕೃಷ್ಣ ಭಟ್, ಶಂಕರ ಮಠದ ಕಾರ್ಯದರ್ಶಿ ರವೀಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.