ADVERTISEMENT

ನೀರಿನ ಸಮಸ್ಯೆ ಬಗೆಹರಿಸಿ

ಹಾಸನ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2015, 7:32 IST
Last Updated 9 ಏಪ್ರಿಲ್ 2015, 7:32 IST

ಹಾಸನ: ‘ಜಿಲ್ಲೆಯ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಸಮಸ್ಯೆ ಇರುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಯಾವ ಗ್ರಾಮದಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನರು  ಪರಿತಪಿಸುವಂತೆ ಆಗಬಾರದು. ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನೀರು ನೈರ್ಮಲ್ಯ ವಿಭಾಗದ ಹಾಗೂ ಚೆಸ್ಕಾಂ ಎಂಜಿನಿಯರ್‌ಗಳು ಪರಸ್ಪರರ ಮೇಲೆ ಜವಾಬ್ದಾರಿ ಹೊರಿಸದೆ, ಸಬೂಬು ಹೇಳದೆ ಶೀಘ್ರ ಜನರ ಬವಣೆ ನೀಗಿಸುವತ್ತ ಗಮನ ಹರಿಸಬೇಕು ಎಂದರು.

‘ಕುಡಿಯುವ ನೀರಿನ ಯೋಜನೆಗಳಿಗಾಗಿ ಕಳೆದ ವರ್ಷ ಸುಮಾರು ₨ 88 ಕೋಟಿ ನೀಡಲಾಗಿತ್ತು. ಕೊಳವೆ ಬಾವಿ, ತೆರೆದ ಬಾವಿ, ಕೆರೆ, ನದಿ ಎಲ್ಲಾ ಮೂಲಗಳನ್ನೂ ಬಳಸಿ ನಗರ, ಪಟ್ಟಣ ಮತ್ತು ಹಳ್ಳಿಗಳಿಗೆ ನೀರು ಪೂರೈಸಬೇಕು. ಕಾಚೇನಹಳ್ಳಿ ಯೋಜನೆಯೂ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಉಮೇಶ್ ಎಚ್. ಕುಸಗಲ್, ‘ಕುಡಿಯುವ ನೀರು ಸಮಸ್ಯೆ ನಿವಾರಿಸಲು ತಾಲ್ಲೂಕು ಹಂತದಲ್ಲಿ ತಂಡಗಳಿದ್ದು, ಉಪವಿಭಾಗಾಧಿಕಾರಿ ಅವುಗಳ ಮೇಲ್ವಿಚಾರಣೆ ಮಾಡಿ ವರದಿ ಸಲ್ಲಿಸಬೇಕು. ಅದೇ ರೀತಿ ಪೋಡಿ, ಮೊಜಣಿ, ಹದ್ದು ಬಸ್ತು ಸರ್ವೆ ಪ್ರಕರಣಗಳ ಇತ್ಯರ್ಥದ ಬಗ್ಗೆಯೂ ಗಮನ ಹರಿಸಬೇಕು’ ಎಂದು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ, ‘ಜಿಲ್ಲಾ ಪಂಚಾಯಿತಿಯ ಎಲ್ಲ ಲೆಕ್ಕ ಶೀರ್ಷಿಕೆಯಡಿ ಯೋಜನೆ ತಯಾರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಿಲ್ಲನ್ನು ಖಜಾನೆಗೆ ಸಲ್ಲಿಸಲಾಗಿದೆ. ಮಾರ್ಚ್‌ 31ರಂದು ಖಜಾನೆ ಲಾಕ್ ಆಗಿದ್ರಿಂದ ಕೋಟ್ಯಾಂತರ ರೂಪಾಯಿಗಳ ಕಾಮಗಾರಿ ಪೂರ್ಣಗೊಂಡಿದ್ದರೂ, ಬಿಲ್‌ ಪಾವತಿಯಾಗದೆ 2015–-16ನೇ ಸಾಲಿಗೆ ಮುಂದುವರೆದ ಕಾಮಗಾರಿಗಳಾಗಿ ಉಳಿದುಕೊಂಡಿವೆ. ಇದರಿಂದ 2015-–16ನೇ ಸಾಲಿಗೆ ನೀಡುವ ಅನುದಾನ ಮುಂದುವರೆದ ಕಾಮಗಾರಿಗೆ ವಚ್ಚ ಮಾಡಬೇಕಾಗುತ್ತದೆ. ಈ ಸಾಲಿಗೆ ನಿಗದಿಮಾಡುವ ಅನುದಾನದೊಂದಿಗೆ 2014–-15ನೇ ಸಾಲಿನ ಮುಂದುವರೆದ ಕಾಮಗಾರಿಗಳಿಗಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿಕೊಡಬೇಕು’ ಎಂದು ಉಸ್ತುವಾರಿ ಕಾರ್ಯದರ್ಶಿಯನ್ನು ಕೊರಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಸಕಲೇಶಪುರ  ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಲರಾಮ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪುಟ್ಟಸ್ವಾಮಿ, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಭಾಗವಹಿಸಿದ್ದರು.

2014–-15ನೇ ಸಾಲಿನ ಮುಂದುವರಿದ ಕಾಮಗಾರಿಗಳಿಗಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿಕೊಡಬೇಕು
ಲಕ್ಷ್ಮಣಗೌಡ, ಉಪಾಧ್ಯಕ್ಷ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.