ADVERTISEMENT

ಪತಿ ಹುಡುಕಿ ಕೊಡಿ: ಪತ್ನಿ ಮೊರೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 6:10 IST
Last Updated 4 ಜೂನ್ 2011, 6:10 IST

ಹಾಸನ: ಆರು ತಿಂಗಳ ಹಿಂದೆ ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಮೇಲ್ಜಾತಿ ಯುವಕ ಈಗ ಬಿಟ್ಟು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. 

ಚನ್ನರಾಯಪಟ್ಟಣ ತಾಲ್ಲೂಕಿನ ಬಿಂಡಿಗನಹಳ್ಳಿ ದಲಿತ ಯುವತಿ ಸುನಂದ ಮತ್ತು ಹಾಸನ ತಾಲ್ಲೂಕು ಕಲ್ಲಹಳ್ಳಿಯ ಸೋಮಶೇಖರ್ ವರ್ಷದ ಹಿಂದೆ ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಸುನಂದ ಎಲ್ಲಾ ವಿಷಯವನ್ನು ಸೋಮಶೇಖರ್‌ಗೆ ತಿಳಿಸಿದ್ದರು.

ಅಂತರ್ಜಾತಿ ವಿವಾಹಕ್ಕೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿದರಾದರೂ 2010ರ ಡಿಸೆಂಬರ್‌ನಲ್ಲಿ ಸೋಮಶೇಖರ್ ಸುನಂದಾಳನ್ನು ವಿವಾಹವಾಗಿದ್ದ. ಇವರ ದಾಂಪತ್ಯ ಕೆಲ ದಿನ ಅನ್ಯೋನ್ಯವಾಗಿಯೇ ನಡೆದಿತ್ತು.


ಹಣದ ಆಸೆ,  ಕುಟುಂಬದವರ ಹೇಳಿಕೆ ಮಾತು ಕೇಳಿ ಸೋಮಶೇಖರ್ ಎರಡು ತಿಂಗಳ ಹಿಂದೆ ಸುನಂದ ಅವರನ್ನು  ತವರು ಮನೆಗೆ ಬಿಟ್ಟು ಹೋದವ ಮರಳಿ ಬಂದಿಲ್ಲ. ಎರಡು ತಿಂಗಳಿನಿಂದ ಪತಿಗಾಗಿ ಹುಡುಕಾಡಿದ ಸುನಂದ ಇದಕ್ಕೆಲ್ಲಾ ಪತಿ ಮನೆಯವರೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೇ ಪತಿ ಮನೆಯವರು ತನಗೆ ಕೊಲೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಎಚ್.ಡಿ. ರೇವಣ್ಣ ಅಭಿಮಾನಿಗಳ ಸಂಘ ಮತ್ತು ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸುನಂದ ಅವರ ನೇರವಿಗೆ ಧಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT