ADVERTISEMENT

ಫಸಲು ಕುಸಿತದ ಭೀತಿಯಲ್ಲಿ ಮಾವು ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 7:45 IST
Last Updated 17 ಫೆಬ್ರುವರಿ 2012, 7:45 IST
ಫಸಲು ಕುಸಿತದ ಭೀತಿಯಲ್ಲಿ ಮಾವು ಬೆಳೆಗಾರ
ಫಸಲು ಕುಸಿತದ ಭೀತಿಯಲ್ಲಿ ಮಾವು ಬೆಳೆಗಾರ   

ಹಳೇಬೀಡು: `ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೆ~ ಎಂಬುದು ಚಲನಚಿತ್ರವೊಂದರ ಜನಪ್ರತಿಯ ಗೀತೆ. ಸಾಮಾನ್ಯವಾಗಿ ವಸಂತ ಋತುವಿನಲ್ಲಿ ಚಿಗುರುವ ಮಾವು ಈ ಬಾರಿ ಎರಡು ತಿಂಗಳು ಮುಂಚಿತವಾಗಿಯೇ ಹಳೇಬೀಡು ಭಾಗದಲ್ಲಿ ಮಾವಿನ ಮರದಲ್ಲಿ ಚಿಗುರು ಕಾಣಿಸಿಕೊಂಡಿದೆ.

ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಾಣಿಸುವ ಮಾವಿನ ಹೂವು ತಡವಾಗಿ ಅಂದರೆ ಫೆಬ್ರುವರಿ ಯಲ್ಲಿ ಬಂದಿದೆ. ಇಬ್ಬನಿ ಬೀಳುವುದರೊಳಗೆ ಮಾವು ಹೂಬಿಟ್ಟು ಕಾಯಾಗುವ ಹಂತಕ್ಕೆ ತಲುಪಬೇಕು. ಆದರೆ, ಬೇಗ ಚಿಗುರು ಬಂದು ತಡವಾಗಿ ಹೂವು ಬಿಟ್ಟು, ಚಿಗುರು ಹೂವು ಒಟ್ಟಾಗಿ ಬರುತ್ತಿರುವುದರಿಂದ ಮಾವಿನ ಫಸಲಿಗೆ ಹೊಡೆತ ಬೀಳಲಿದೆ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಕಳೆದ ವರ್ಷ ಸಾಕಷ್ಟು ಮಾವಿನ ಫಸಲು ಬಂದಿತ್ತು. ಆದರೆ ಬೆಲೆ ಕುಸಿಯಿತು. ಹವಾ ಮಾನ ವೈಪರೀತ್ಯದಿಂದ ಕಾಯಿ ಬಲಿಯುವ ಸಮಯಕ್ಕೆ ಸರಿಯಾಗಿ ಕಪ್ಪಾಯಿತು. ಕಪ್ಪಾದ ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಯಿತು. ಹೀಗಾಗಿ ಕಳೆದ ವರ್ಷ ಮಾವು ಬೆಳೆಗಾರರು ನಷ್ಟ ಅನುಭವಿಸಿದರು. ಈ ವರ್ಷ ಫಸಲು ಗಣನೀಯವಾಗಿ ಇಳಿಮುಖ ವಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳನ್ನು ಈ ಭಾಗದ ರೈತರು ಹೇಳುತ್ತಿದ್ದಾರೆ.

ಅಡಗೂರು ಗ್ರಾಮ ಮಾವಿಗೆ ಹೆಸರಾಗಿದೆ. ಇಲ್ಲಿಯ ಮಣ್ಣು ಹಾಗೂ ವಾತಾವರಣ ಮಾವು ಕೃಷಿಗೆ ಹೇಳಿ ಮಾಡಿಸಿದಂತಿದೆ. ಪ್ರತಿ ಬಾರಿ ಉತ್ತಮ ಫಸಲಿನೊಂದಿಗೆ ಹಣ್ಣು ಸ್ವಾದಿಷ್ಟ ಹಾಗೂ ರುಚಿಕರವಾಗಿರುತ್ತದೆ. 3 ವರ್ಷದಿಂದ ಹವಾಮಾನದ ವೈಪರೀತ್ಯದಿಂದ ಇಲ್ಲಿಯ ಮಾವು ಬೆಳೆಗಾರರಿಗೆ ಆರ್ಥಿಕ ಹೊಡೆತ ಬಿದ್ದಿದೆ.

`ಫೆಬ್ರುವರಿ ತಿಂಗಳಿನಲ್ಲಿ ಪಶ್ಮಿಮ ದಿಕ್ಕಿನಿಂದ ಗಾಳಿ ಬೀಸುತ್ತದೆ. ಈ ಅವಧಿಯಲ್ಲಿ ಮಾವಿನ ಮರಗಳಲ್ಲಿ ಮಿಡಿ ಆಗಿದ್ದರೆ ಬೆಳೆಗೆ ಯಾವುದೇ ಹಾನಿ ಸಂಭವಿಸದು. ಇಬ್ಬನಿ ಬಿದ್ದ ನಂತರ ಮಾವು ಹೂವಾದರೆ ಬೂದಿರೋಗ ಬರುವ ಸಾಧ್ಯ ಇದೆ. ವರ್ಷಕ್ಕೊಮ್ಮೆ ಫಸಲು ಬರುವ ಮಾವಿಗೆ ಮೂರು ವರ್ಷದಿಂದ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ~ ಎನ್ನುತ್ತಾರೆ ಅಡಗೂರಿನ ಬೆಳೆಗಾರ ಧರಣೇಂದ್ರ.

ಮಾವಿನ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು. ಮಾವಿನ ತೋಪಿನಲ್ಲಿ ನೀರಾವರಿ ಬೆಳೆ ಮಾಡಲು ಸಾಧ್ಯವಿಲ್ಲ. ತೋಟಗಾರಿಕೆ ಇಲಾಖೆ ಮಾವಿಗೆ ತೊಂದರೆಯಾಗದಂತೆ ತೋಪುಗಳಲ್ಲಿ ಇತರ ಬೆಳೆ ಮಾಡಲು ದಾರಿತೊರಿ ಸಬೇಕು. ಎನ್ನುತ್ತಾರೆ ರೈತ ಸಂಘದ ಎಲ್.ಈ. ಶಿವಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.