ADVERTISEMENT

ಬಿತ್ತನೆ ಬೀಜ: ಮುಂದುವರಿದ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಮೇ 2012, 9:20 IST
Last Updated 17 ಮೇ 2012, 9:20 IST

ಹಾಸನ: ಹಾಸನ ಎಪಿಎಂಸಿಯಲ್ಲಿ ಆಲೂಗೆಡ್ಡೆ ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ ಮುಂದುವರಿದಿದೆ.
 ಮಂಗಳವಾರ ಮುಂಜಾನೆಯೇ ಬಿಲ್ ಹಾಕಿಸಿ ಕೊಂಡು ಇಡೀ ದಿನ ಕಾಯ್ದಿದ್ದ ರೈತರು ಬುಧವಾರ ಮುಂಜಾನೆ ಮತ್ತೆ ಎಪಿಎಂಸಿಗೆ ಬಂದು ಇಂದಾದರೂ ಬಿತ್ತನೆ ಬೀಜ ಸಿಗಬಹುದು ಎಂದು ಕಾಯುತ್ತಿರು ವುದು ಕಂಡುಬಂತು.

 ಗ್ರಾಮ ಲೆಕ್ಕಾಧಿಕಾರಿಗಳು ನೀಡಿರುವ ಚೀಟಿಯ ಅಧಾರದಲ್ಲಿ ಅನೇಕ ವರ್ತಕರು ರೈತರಿಂದ ಹಣ ಪಡೆದು ಚೀಟಿ ನೀಡಿದ್ದಾರೆ. ಆದರೆ ಶೈತ್ಯಾಗಾರದಿಂದ ಲೋಡ್ ಬಾರದ ಕಾರಣ, `ನಾಳೆ ಬನ್ನಿ, ಲೋಡ್ ಬಂದ ಬಳಿಕ ಬಿತ್ತನೆ ಬೀಜ ಕೊಡುತ್ತೇವೆ~ ಎಂದು ವರ್ತಕರು ಆಚೆ ಹೋಗಿದ್ದಾರೆ. ಅವರು ನೀಡಿದ್ದ ಚೀಟಿಯನ್ನು ತೋರಿಸಿ ರೈತರು ಬಿತ್ತನೆ ಬೀಜಕ್ಕೆ ಸಿಂಪಡಿಸುವ ಔಷಧವನ್ನೂ ಪಡೆದಾಗಿದೆ. ಆದರೆ ಬಿತ್ತನೆ ಬೀಜ ಇನ್ನೂ ಕೈಸೇರಿಲ್ಲ.

 ಯಾರ್ಡ್ ಒಳಗೆ ಬಿತ್ತನೆ ಬೀಜ ತುಂಬಿದ ಲಾರಿ ಬರುತ್ತಿದ್ದಂತೆ ನಮಗೆ ಸಿಗಬಹುದೆಂಬ ನಿರೀಕ್ಷೆಯಿಂದ ಚಾತಕ ಪಕ್ಷಿಗಳಂತೆ ನೋಡುತ್ತಿದ್ದಾರೆ. ಅನೇಕ ರೈತರು ಬಿತ್ತನೆ ಬೀಜ ಖರೀದಿಗಾಗಿ ಮನೆಯಲ್ಲಿದ್ದ ಒಡವೆಗ ಳನ್ನು ಅಡವಿಟ್ಟು ಹಣ ತಂದಿದ್ದಾರೆ. `ಮನೆಗೆ ಹೋದರೆ ಬಿತ್ತನೆ ಬೀಜ ತರಲಾಗಲಿಲ್ಲವೇ ಎಂದು ಮನೆಯವರು ಬೈತಾರೆ, ಇಲ್ಲಿದ್ದರೆ ಇನ್ನೊಂದು ಕಷ್ಟ. ಏನು ಮಾಡಬೇಕು ಎಂದು ತೋಚುತ್ತಿಲ್ಲ~ ಎಂದು ನೊಂದ ರೈತರೊಬ್ಬರು ನುಡಿದಿದ್ದಾರೆ.

 ಮಾಧ್ಯಮದವರು ಸಮಸ್ಯೆ ಕೇಳಲು ಹೋದರೆ, `ದರ ನಿಗದಿಮಾಡಿದವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಐದೈದು ಬಾರಿ ಸಭೆನಡೆಸಿದವರು, ರೈತ ಮುಖಂಡ ರೆಲ್ಲ ಈಗ ಎಲ್ಲಿದ್ದಾರೆ ? ಎಂದು ಪ್ರಶ್ನಿಸುಸುತ್ತಾರೆ. ಸಮಸ್ಯೆ ಪರಿಹರಿಸಿ ಎಂದು ಗೋಗರೆಯುತ್ತಿದ್ದಾರೆ. ಜತೆಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲೋಡಿಂಗ್ ಸಮಸ್ಯೆ: ಶೈತ್ಯಾಗಾರದಿಂದ ಲಾರಿಗಳ ಲೋಡಿಂಗ್ ವಿಳಂಬವಾಗುತ್ತಿರುವುದೇ ಸಮಸ್ಯೆ ಉಂಟಾಗಲು ಕಾರಣ ಎಂದು ಶೈತ್ಯಾಗಾರದ ಸಿಬ್ಬಂದಿಯೇ ನುಡಿಯುತ್ತಿದ್ದಾರೆ.ಪ್ರತಿ ದಿನ ನೂರು ಲಾರಿಗಳಷ್ಟು ಬಿತ್ತನೆ ಬೀಜ ಎಪಿಎಂಸಿಗೆ ಬಂದರೆ ಮಾತ್ರ ರೈತರ ಬೇಡಿಕೆ ಈಡೇರಿಸಲು ಸಾಧ್ಯ. ಆದರೆ ಪ್ರಸಕ್ತ 50ಲಾರಿಗಳಿಗಿಂತ ಕಡಿಮೆ ಬಿತ್ತನೆ ಬೀಜ ಬರುತ್ತಿದೆ.

 ಶೈತ್ಯಾಗಾರದ ಹೊರಗೆ ಬಿತ್ತನೆ ಬೀಜ ತುಂಬಿಸಿಕೊ ಳ್ಳಲು ಲಾರಿಗಳ ಉದ್ದನೆಯ ಸಾಲು ಕಾಣಿಸುತ್ತಿದೆ.
ಬಿತ್ತನೆ ಬೀಜದ ಗುಣಮಟ್ಟ ಹಾಗೂ ತೂಕವನ್ನು ಪರಿಶೀಲಿಸಿಯೇ  ಖರೀದಿಸುವಂತೆ ಜಿಲ್ಲಾಡಳಿತ ಸೂಚನೆ ನೀಡುತ್ತದೆ. ಆದರೆ ಅಷ್ಟು ವ್ಯವಧಾನ ಯಾವ ರೈತರಲ್ಲೂ ಇಲ್ಲ.

ಲಾರಿ ಬರುತ್ತಿದ್ದಂತೆ ನೇರವಾಗಿ ಅದರಿಂದ ತಮ್ಮ ವಾಹನಗಳಿಗೆ ತುಂಬಿಕೊಂಡು ಊರಿಗೆ ಧಾವಿಸುತ್ತಿದ್ದಾರೆ. `ನಾವು ಖರೀದಿಸಿರುವ ಆಲೂಗೆಡ್ಡೆ ಗಾತ್ರ ಹೇಗಿದೆ ಎಂಬುದೂ ಮನೆಗೆ ಹೋದ ಬಳಿಕವೇ ತಿಳಿಯುತ್ತದೆ. ರೈತರಿಗೆ ಈ ಬಾರಿ ಭಾರಿ ಅನ್ಯಾಯವಾಗುತ್ತಿದೆ~ ಎಂದು ಹಲವರು ದೂರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.