ADVERTISEMENT

ಬಿಸಿಯೂಟ ಕೆಲಸದಿಂದ ಮಹಿಳೆ ವಜಾ: ವಿರೋಧ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 8:55 IST
Last Updated 13 ಜೂನ್ 2011, 8:55 IST

ರಾಮನಾಥಪುರ: ಇಲ್ಲಿಗೆ ಸಮೀಪದ ಬೆಟ್ಟಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಯೋಜನೆಗೆ ನಿಯೋಜಿಸಿದ್ದ ಮಹಿಳೆಯೊಬ್ಬರನ್ನು ಏಕಾಏಕಿ ಕೆಲಸದಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮೂರು ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ ಅಕ್ಕಯ್ಯಮ್ಮ ಅವರನ್ನು ಕಾರಣವೇ ಇಲ್ಲದೆ ಕೆಲಸದಿಂದ ವಜಾಗೊಳಿಸಿ ಅನ್ಯಾಯ ಎಸಗಲಾಗಿದೆ. ಕೆಲ ಎಸ್‌ಡಿಎಂಸಿ ಹಾಗೂ ಗ್ರಾಪಂ ಸದಸ್ಯರು ಜಾತಿ ರಾಜಕೀಯ ಮಾಡಿಕೊಂಡು ಣ ಗ್ರಾ.ಪಂ. ಕಚೇರಿಯಲ್ಲಿ ಕುಳಿತು ಗ್ರಾಮಸ್ಥರ ಗಮನಕ್ಕೆ ತರದೇ ಏಕಾಏಕಿ ಇವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಆರೋಪಿಸಿದರು.

ಶಾಲೆಯಲ್ಲಿ ಬಿಸಿಯೂಟ ತಯಾರಿಸಲು 3 ವರ್ಷಗಳಿಂದ ಮೂವರು3 ಮಹಿಳೆಯರನ್ನು ನೇಮಕ ಮಾಡಲಾಗಿತ್ತು. ಈ ಬಾರಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣದಿಂದ ಒಬ್ಬರನ್ನು ಕೈಬಿಡಲಾಗಿದೆ. ಇದು ತಮ್ಮ ಗಮನಕ್ಕೂ ಬಂದಿಲ್ಲ ಎಂದು ಮುಖ್ಯ ಶಿಕ್ಷಕ ಕುಮಾರಸ್ವಾಮಿ  ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.

ಇದರಿಂದ ಸಮಾಧಾನಗೊಳ್ಳದ ಒಂದು ಗುಂಪು ಶಾಲೆಯಲ್ಲಿ ಈಗಿರುವ ಎಲ್ಲ ಅಡುಗೆ ಕೆಲಸದ ಸಿಬ್ಬಂದಿಗಳನ್ನು ಕಿತ್ತು ಬಿಸಿಯೂಟ ಯೋಜನೆಯ ಕೆಲಸವನ್ನು ಯಾವುದಾದರೂ ಮಠಕ್ಕೆ ವಹಿಸಬೇಕು ಎಂದರು. ಇದಕ್ಕೆ ಒಪ್ಪದ ಮತ್ತೊಂದು ಗುಂಪು ಮಠದಿಂದ ತಯಾರಿಸುತ್ತಿರುವ ಬಿಸಿಯೂಟ ಕಳೆಪೆಯಾಗಿರುವ ಬಗ್ಗೆ ಈಗಾಗಲೇ ಹಲವು ಶಾಲೆಗಳಲ್ಲಿ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಠಕ್ಕೆ ವಹಿಸುವುದು ಸೂಕ್ತವಲ್ಲ ಎಂದು ವಿರೋಧ ವ್ಯಕ್ತಪಡಿಸಿ, ಕೆಲಸದಿಂದ ತೆಗೆದು ಹಾಕಿರುವ ಮಹಿಳೆಯನ್ನು ಪುನಃ ಅಡುಗೆ ಕೆಲಸಕ್ಕೆ ನಿಯೋಜಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.