ADVERTISEMENT

ಬೇಸಿಗೆಯಲ್ಲೂ ಬಿಸಿಯೂಟ; ನೀರಸ ಸ್ಪಂದನ

​ಪ್ರಜಾವಾಣಿ ವಾರ್ತೆ
Published 4 ಮೇ 2012, 5:45 IST
Last Updated 4 ಮೇ 2012, 5:45 IST
ಬೇಸಿಗೆಯಲ್ಲೂ ಬಿಸಿಯೂಟ; ನೀರಸ ಸ್ಪಂದನ
ಬೇಸಿಗೆಯಲ್ಲೂ ಬಿಸಿಯೂಟ; ನೀರಸ ಸ್ಪಂದನ   

ಹಾಸನ: ಆಲೂರು ಬಿಟ್ಟು ಜಿಲ್ಲೆಯ ಇತರ ಎಲ್ಲ ತಾಲ್ಲೂಕುಗಳಲ್ಲೂ ಬೇಸಿಗೆ ರಜೆಯಲ್ಲಿ ಬಸಿಯೂಟದ ಯೋಜನೆ ಜಾರಿಯಾಗಿದ್ದರೂ ಊಟಕ್ಕೆ ಬರುವ ಮಕ್ಕಳ ಸಂಖ್ಯೆ ಶೇ 50ರ ಆಸುಪಾಸಿನಲ್ಲೇ ಇದೆ.

ಅನೇಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೇ 10 ರಿಂದ 15 ಇದ್ದು ಇಂಥ ಶಾಲೆಗಳಲ್ಲಿ ಐದಾರು ವಿದ್ಯಾರ್ಥಿಗಳು ಮಾತ್ರ ಊಟಕ್ಕೆ ಬರುತ್ತಿದ್ದಾರೆ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮನೆಮನೆಗೆ ಹೋಗಿ ಮಕ್ಕಳನ್ನು ಊಟಕ್ಕೆ ಕಳುಹಿಸುವಂತೆ ಹೇಳಿದ್ದರೂ ಮಕ್ಕಳು ಮಾತ್ರ ಬರುತ್ತಿಲ್ಲ.

ಜಿಲ್ಲೆಯಲ್ಲಿ ಏಪ್ರಿಲ್ 16ರಿಂದ 21ರವರೆಗಿನ ಅಂಕಿ ಅಂಶಗಳ ಪ್ರಕಾರ ಎಲ್ಲ ಏಳು ದಿನಗಳಲ್ಲೂ ಬಿಸಿಯೂಟ ತಯಾರಿಸಿದ್ದು, ಅರಕಲಗೂಡು ತಾಲ್ಲೂಕಿನಲ್ಲಿ ಶೇ 54, ಅರಸೀಕೆರೆ ಯಾಲ್ಲೂಕಿನಲ್ಲಿ ಶೇ 47, ಬೇಲೂರಿನಲ್ಲಿ ಶೇ 53, ಚನ್ನರಾಯಪಟ್ಟಣದಲ್ಲಿ ಶೇ 59, ಹಾಸನದಲ್ಲಿ (ಗರಿಷ್ಠ) ಶೇ 75 ಹಾಗೂ ಹೊಳೆನರಸೀಪುರದಲ್ಲಿ ಶೇ 46ರಷ್ಟು ಶಾಲಾ ಮಕ್ಕಳು ಊಟ ಮಾಡಿದ್ದಾರೆ.

ಹಾಸನ ನಗರದ ಅನೇಕ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭವಾಗದಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ಬಳಿಕ ಎಲ್ಲ ಶಾಲೆಗಳಲ್ಲಿ ಊಟ ಆರಂಭಸಿದ್ದರೂ, ಮಕ್ಕಳ ಸಂಖ್ಯೆ ತೀರ ಕಡಿಮೆ ಇದೆ.

ಗುರುವಾರ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿದಾಗ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಯಾಗಿರುವುದು ಕಂಡುಬಂತು. ಹಾಸನ ಚನ್ನಪಟ್ಟಣ ಸರ್ಕಾರಿ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 15ಕ್ಕೂ ಹೆಚ್ಚು ಮಕ್ಕಳು ಊಟ ಮಾಡುತ್ತಿದ್ದರು. ಕಟ್ಟಾಯ ಸಮೀಪದ ಕೋಡರಾಮನಹಳ್ಳಿ ಶಾಲೆಯಲ್ಲಿ ಒಟ್ಟು ಹತ್ತು ವಿದ್ಯಾರ್ಥಿಗಳಿದ್ದು, ಅವರಲ್ಲಿ ಐದರಿಂದ ಏಳು ವಿದ್ಯಾರ್ಥಿಗಳು ಊಟಕ್ಕೆ ಬರುತ್ತಾರೆ.

`ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಪ್ರತಿ ದಿನ 50 ರಿಂದ 60 ಮಕ್ಕಳು ಊಟಕ್ಕೆ ಬರುತ್ತಾರೆ. ಮನೆಮನೆಗೆ ಹೋಗಿ ಪ್ರಚಾರ ಮಾಡಿದ್ದೇವೆ. ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮದುವೆ ಮುಂಜಿ ಏನಾದರೂ ಇದ್ದರೆ ಮಕ್ಕಳ ಸಂಖ್ಯೆ 15 ರಿಂದ 20ಕ್ಕೆ ಇಳಿಯುತ್ತದೆ ಉಳಿದ ದಿನಗಳಲ್ಲಿ ಮಕ್ಕಳು ಬಂದೇ ಬರುತ್ತಾರೆ~ ಎಂದು ಚನ್ನಪಟ್ಟಣ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಮತಾ   ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.