ADVERTISEMENT

ಮದ್ಯಕ್ಕೆ ಹೆಚ್ಚು ದರ ವಸೂಲಿ: ದೂರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:25 IST
Last Updated 6 ಸೆಪ್ಟೆಂಬರ್ 2013, 6:25 IST

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಮಹಾದೇವಪ್ಪ ಅವರು ಪತ್ರಿಕಾಗೋಷ್ಠಿ ನಡೆಯುತ್ತಿದ್ದಾಗ ಎರಡು ಮದ್ಯದ ಪ್ಯಾಕೆಟ್‌ಗಳೊಂದಿಗೆ ಒಳಗೆ ಪ್ರವೇಶಿಸಿದ ವ್ಯಕ್ತಿಯೊಬ್ಬರು, `ಮದ್ಯಕ್ಕೆ ನಿಗದಿಗಿಂತ ಹೆಚ್ಚು ದರ ಪಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ' ಎಂದು ಒತ್ತಾಯಿಸಿದ ಘಟನೆ ಗುರುವಾರ ನಡೆಯಿತು.

ಎಂಎಸ್‌ಐಎಲ್‌ನ ಅಧಿಕೃತ ಅಂಗಡಿಯಲ್ಲೇ ಎಂಆರ್‌ಪಿಗಿಂತ ಹೆಚ್ಚಿನ ದರವನ್ನು ಪಡೆಯಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಡುವಳ್ಳಿಯ ಕರಿಯಪ್ಪ ಎಂಬುವವರು ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಜಿಲ್ಲೆಗೆ ಯಾರೇ ಸಚಿವರು, ಮುಖಂಡರು ಬಂದರೂ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಆದರೆ ಅವರ ಸಮಸ್ಯೆಗೆ ಪರಿಹಾರ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರು ಗುರುವಾರ ಉಸ್ತುವಾರಿ ಸಚಿವರ ಪತ್ರಿಕಾಗೋಷ್ಠಿಗೇ ನುಗ್ಗಿ ಅಳಲು ತೋಡಿಕೊಂಡರು.

`ನಾನು ಮದ್ಯ ಸೇವನೆ ಮಾಡುವುದಿಲ್ಲ. ಆದರೆ ನಮ್ಮ ಹೊಲ, ಗದ್ದೆಗೆ ಕೂಲಿ ಆಳುಗಳು ಬರಬೇಕಾದರೆ ಕೂಲಿಯ ಜತೆಗೆ ಸಂಜೆ ಒಂದು ಕ್ವಾರ್ಟರ್  ಮದ್ಯವನ್ನೂ ಕೊಡಬೇಕು. ಆದ್ದರಿಂದ ಮದ್ಯ ಖರೀದಿ ನಮಗೆ ಅನಿವಾರ್ಯ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾರಾಯಿ ನಿಷೇಧಿಸುವ ಮೂಲಕ ಹೀರೋ ಅನ್ನಿಸಿಕೊಂಡರು.

ಆದರೆ ನಮ್ಮ ಸಮಸ್ಯೆ ಕೇಳೋರು ಯಾರು ? ಎಂಎಸ್‌ಐಎಲ್‌ನಲ್ಲಿ ಪ್ಯಾಕೆಟ್‌ಮೇಲೆ ಎಂಆರ್‌ಪಿಗಿಂತ 15 ರಿಂದ 20ರೂಪಾಯಿ ಹೆಚ್ಚು ಸಂಗ್ರಹಿಸುತ್ತಾರೆ. ಯಾರೂ ಈ ಬಗ್ಗೆ ಚಿಂತೆ ಮಾಡುತ್ತಿಲ್ಲ. ಕೃಷಿಕರಿಗೆ ಈ ಸಮಸ್ಯೆಯೂ ಕಾಡುತ್ತಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ' ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.