ADVERTISEMENT

ಮುಸಲಧಾರೆಯ ಮುನಿಸು: ರೈತ ಚಿಂತಾಕ್ರಾಂತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 6:10 IST
Last Updated 4 ಜುಲೈ 2012, 6:10 IST

ಚನ್ನರಾಯಪಟ್ಟಣ: ಭಾರೀ ನಿರೀಕ್ಷೆಯಿಂದ ಬಿತ್ತನೆ ಮಾಡಿರುವ ಬೆಳೆ ಮೇಲೇಳದೆ, ಹಸು-ಕುರಿಗಳಿಗೆ ಮೇಯಲು ಚಿಬಿಡುತ್ತಿದ್ದಾರೆ ಎಂದರೆ ಆ ರೈತರ ಸ್ಥಿತಿ ಹೇಗಿರಬಹುದು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ತಾಲ್ಲೂಕಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಮಾಡಿದವರ ಸ್ಥಿತಿ ಅಷ್ಟು ಶೋಚನೀಯವಾಗಿದೆ.

ಬೆಳೆಗೆ ನೀರು ಹರಿಸುವುದು ಬೇರೆ ವಿಚಾರ ತಾಲ್ಲೂಕಿನ ಕೆರೆ, ಕಟ್ಟೆಗಳು ಬರಿದಾಗಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ದನ, ಕರುಗಳಿಗೆ ಮೇವಿಗೆ ತೊಂದರೆಯಾಗಿದೆ. ಕೊಳವೆಬಾವಿಯಲ್ಲಿ ನೀರು ಬತ್ತಿ ಹೋಗುತ್ತಿರುವುದರಿಂದ ನೀರನ್ನು ನಂಬಿ ಬೆಳೆದಿದ್ದ ಬೆಳೆ ಸಹ ಕೈ ಸೇರುತ್ತಿಲ್ಲ ಎಂಬ ಕೊರಗು ರೈತರದು.

ಏಪ್ರಿಲ್‌ನಿಂದ ಜೂನ್ ಅಂತ್ಯಕ್ಕೆ ಸರಾಸರಿ 214 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 188.3  ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 256 ಮಿ.ಮೀ ಮಳೆಯಾಗಿತ್ತು.

ಕಷ್ಟಪಟ್ಟು ಬೆಳೆದಿದ್ದ ದ್ವಿದಳ ಧಾನ್ಯದ ಫಸಲು ಮಳೆಯ ಕೊರತೆಯಿಂದ ಕೈ ಕೊಟ್ಟಿದೆ. ಹಾಗಾಗಿ ಹೊಲದಲ್ಲಿ ಒಣಗಿದ್ದ ಹೆಸರು, ಅಲಸಂದೆ ಬೆಳೆಯನ್ನು ಕುರಿಗಳಿಗೆ ಮೇಯಿಸಲಾಗುತ್ತಿದೆ ಎನ್ನುತ್ತಾರೆ ರೈತ ಮಂಜೇಗೌಡ.

ರೈತ ಸಂಪರ್ಕ ಕೇಂದ್ರದಲ್ಲಿ ಮುಸುಕಿನ ಜೋಳ (10ರಿಂದ 12 ವಿಧದ ತಳಿ), ರಾಗಿ, ಬತ್ತ ದಾಸ್ತಾನು ಮಾಡಲಾಗಿದ್ದು, ಸಾವಯವ ಗೊಬ್ಬರ, ಜಿಪ್ಸಂ, ಎರೆಹುಳು ಗೊಬ್ಬರ, ಜಿಂಕ್‌ಸ–ಲ್ಫೇಟ್, ಬೊರಾಕ್ಸ್ ಹಾಗೂ ಜೈವಿಕ ಪೀಡೆ ನಾಶಕಗಳನ್ನು ಸಹಾಯ ಧನದಲ್ಲಿ  ವಿತರಿಸಲಾಗುತ್ತಿದೆ. ಇದರ ಉಪ–ಯೋಗವನ್ನು ರೈತರು ಪಡೆದುಕೊಳ್ಳಬೇಕು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿ ಪುಟ್ಟಭೈಲಯ್ಯ. ಆದರೆ ಮಳೆಯಾಗದಿದ್ದರೆ ಗೊಬ್ಬರ ಏನು ಮಾಡಬೇಕು ಎಂಬುದು ರೈತರ ಪ್ರಶ್ನೆಯಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.