ADVERTISEMENT

ಮೂಲಸೌಲಭ್ಯ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:45 IST
Last Updated 18 ಸೆಪ್ಟೆಂಬರ್ 2013, 6:45 IST

ಹಾಸನ: ‘ನಗರದ ಶ್ರೀನಗರ ಪ್ರದೇಶ ದಲ್ಲಿರುವ ಕೊಳೆಗೇರಿ ನಿವಾಸಿಗಳು ಅನೇಕ ಸಮಸ್ಯೆಗಳ ಮಧ್ಯೆ ಬದುಕು ತ್ತಿದ್ದು, ಇಲ್ಲಿಗೆ ಮೂಲ ಸೌಲಭ್ಯಗಳನ್ನು ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ (ಕೆಕೆಎನ್‌ ಎಸ್‌ಎಸ್‌) ನೇತೃತ್ವದಲ್ಲಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಮುಂದಿನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಪ್ರತಿಭಟನಾಕಾರರು, ತಮಗೆ ಜೀವಿಸಲು ಒಳ್ಳೆಯ ವಾತಾವರಣ ನಿರ್ಮಿಸಿ ಕೊಡಿ ಎಂದು ಆಗ್ರಹಿಸಿದರು.

‘ಈ ಕೊಳೆಗೇರಿಯಲ್ಲಿ ಸುಮಾರಿ 800 ಕಟುಂಬಗಳಿವೆ. ಇವರಲ್ಲಿ 272 ಮಂದಿಗೆ ಹುಡ್ಕೋ ವಸತಿ ಯೋಜನೆಯಿಂದ ಮನೆಗಳನ್ನು ನೀಡಿದ್ದು ಬಿಟ್ಟರೆ ಉಳಿದವರೆಲ್ಲರೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ನಗರದ ಕಸವನ್ನೆಲ್ಲ ತಂದು ಶ್ರೀನಗರದ ಪಕ್ಕದಲ್ಲೇ ಸುರಿಯಲಾಗುತ್ತಿದೆ.

ಇದರ ಜತೆಗೆ ಕಸಾಯಿಖಾನೆಗಳಿಂದ ಮಾಂಸದ ತ್ಯಾಜ್ಯವನ್ನೂ ತಂದು ಸುರಿಯುವು ದರಿಂದ ನಾವು ನಿತ್ಯ ದುರ್ನಾತದಲ್ಲೇ ಬದುಕಬೇಕಾಗಿ ಬಂದಿದೆ. ಕೂಡಲೇ ಇಲ್ಲಿಂದ ಕಸದ ರಾಶಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲಿ ಉಸಿರಾಡಲು ಶುದ್ಧ ಗಾಳಿಯೂ ಇಲ್ಲದಂತಾಗಿ ಜನರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಇತ್ತ ಗಮನ ಹರಿಸಿ ಕೊಳೆಗೇರಿಯಲ್ಲಿ ರಸ್ತೆ, ಚರಂಡಿ, ಶೌಚಾಲಯ ಮುಂತಾದ ಅಭಿವೃದ್ಧಿ ಕಾರ್ಯ ಮಾಡಬೇಕು’ ಎಂದು ಪ್ರತಿಭಟನಾಕಾರರು    ಒತ್ತಾಯಿಸಿದರು.

ಕೆಕೆಎನ್‌ಎಸ್‌ಎಸ್‌ ಸಂಚಾಲಕ ಎಚ್‌.ಟಿ. ರಾಮೇಗೌಡ, ನಿವಾಸಿಗಳಾದ ಎಚ್‌.ಬಿ. ಯಶೋದಮ್ಮ, ತೌಸೀನ್‌, ಗೌರಮ್ಮ, ಶಬನಮ್‌, ಸುಜಾತಾ, ಝರೀನಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.