ADVERTISEMENT

ಯಶಸ್ಸಿಗೆ ಸತತ ಪ್ರಯತ್ನ ಅಗತ್ಯ

ಕೃಷಿನಿರತ ಮಹಿಳಾ ದಿನಾಚರಣೆಯಲ್ಲಿ ಪ್ರತಿಭಾ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 7:04 IST
Last Updated 5 ಡಿಸೆಂಬರ್ 2013, 7:04 IST

ಹಾಸನ: ‘ಪರಿಸರ ಮಾಲಿನ್ಯ ಈಗ ಹಳ್ಳಿಗಳಿಗೂ ವಿಸ್ತರಿಸಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಂಡು ದೈಹಿಕ ಕೆಲಸಗಳನ್ನು ಮಾಡಿದಲ್ಲಿ ಮಾನಸಿಕ ವರ್ತನೆಗಳು ಸ್ಥಿರಗೊಳ್ಳುತ್ತವೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ  ಸತತ ಪ್ರಯತ್ನ ಮತ್ತು ವೈಜ್ಞಾನಿಕವಾಗಿ ಮಾಹಿತಿ ಪಡೆಯುವುದು ಅಗತ್ಯ’ ಎಂದು ರೈತ ಮಹಿಳೆ ಪ್ರತಿಭಾ ಕೆ.ಬಿ. ಹೇಳಿದರು.

ಕಂದಲಿಯ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ, ಕೃಷಿ ಇಲಾಖೆ, ತೋಟಗಾರಿಕೆ, ಜಲಾನಯನ, ರೇಷ್ಮೆ, ಪಶು ಸಂಗೋಪನೆ ಇಲಾಖೆಗಳು, ಹಾರ್ಟ್‌ ಕ್ಲಿನಿಕ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕೃಷಿನಿರತ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೈನುಗಾರಿಕೆಯ ಬಗ್ಗೆ ತಮ್ಮ ಅನುಭವ ಹೇಳಿಕೊಂಡ ಅವರು, ‘ನಾನು ಹೈನುಗಾರಿಕೆ ಪ್ರಾರಂಭಿಸಿದಾಗ 5 ಹಸುಗಳು ಇದ್ದವು. ಈಗ ಸಂಖ್ಯೆ 120ಕ್ಕೆ ಏರಿದೆ. 30 ಹಸುಗಳು ಹಾಲು ಉತ್ಪಾದನೆ ಮಾಡುತ್ತಿದ್ದು, ದಿನಕ್ಕೆ 600–-800 ಲೀಟರ್ ಹಾಲು ಪಡೆಯುತ್ತಿದ್ದೇನೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಡಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜು, ‘ಹೈನುಗಾರಿಕೆ,  ಮೌಲ್ಯವರ್ಧನೆ, ಸಾವಯವ ಗೊಬ್ಬರ ಉತ್ಪಾದನೆಗಳಲ್ಲಿ ಮಹಿಳೆಯರು ಸಂಘಗಳ ಜೊತೆಗೂಡಿ ಬದಲಾವಣೆಯ ಹಾದಿಯಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.

ಹಾಸನ ಆಕಾಶವಾಣಿಯ ಡಾ.ವಿಜಯ ಅಂಗಡಿ ಮಾತನಾಡಿದರು.

ವಿಶೇಷ ಆಹ್ವಾನಿತರಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಿದಾನಂದ ಅವರು ಮಹಿಳೆಯರು ಮತ್ತು ವಯೋವೃದ್ಧರ ಸಹಾಯವಾಣಿ, ಸಾಂತ್ವನ ಕೇಂದ್ರ ಮತ್ತು ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥಗಾಗಿ ಮಾಡಿರುವ ವಾಹನದ ಸದುಪಯೋಗ ಪಡೆದುಕೊಳ್ಳುವಂತೆ ಕರೆನೀಡಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಶಕೀಲ್ ಅಹಮ್ಮದ್‌,  ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶ್ರೀನಿವಾಸ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಾಸನ ಕೃಷಿ ಕಾಲೇಜಿನ ಡೀನ್‌ ಡಾ.ಎಲ್. ಮಂಜುನಾಥ್, ‘ಮಹಿಳೆಯರು ಉತ್ಪನ್ನಗಳ ಮೌಲ್ಯವರ್ಧನೆಗೆ ಆದ್ಯತೆ ನೀಡಿದರೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಇನ್ನಿತರ ಉಪ ಕಸುಬುಗಳಿಂದ ಲಾಭಗಳಿಸಬಹುದು’ ಎಂದರು.

ರೇಷ್ಮೆ ಕೃಷಿ ಅಧಿಕಾರಿ ರಾಜ ಗೋಪಾಲ್‌, ಶಾರದಾ ಮಂಜುನಾಥ, ಆಲೂರು ಸಹಾಯಕ ತೋಟಗಾರಿಕೆ ನಿರ್ದೇಶಕಿ ವಿಜಯಚಿತ್ರ, ವಿಜ್ಞಾನಿಗಳಾದ ಡಾ.ಜಿ.ಎಸ್. ಕೃಷ್ಣಾರೆಡ್ಡಿ, ಡಾ.ಎಚ್.ಕೆ. ಪಂಕಜಾ, ಡಾ.ಕಾಂತರಾಜ ಕೆರೆಗೋಡು, ಡಾ.ಎ.ಸಿ. ಗಿರೀಶ್ ಭಾಗವಹಿಸಿದ್ದರು. ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್. ಬಸವರಾಜು ಸ್ವಾಗತಿಸಿದರು. ಡಾ.ಟಿ.ಎಸ್. ಮಂಜುನಾಥಸ್ವಾಮಿ ನಿರೂಪಿಸಿದರು. ಡಾ.ಎಸ್. ಚನ್ನಕೇಶವ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.