ADVERTISEMENT

ಯುವಕನ ಮನವೊಲಿಕೆ: ಸುಖಾಂತ್ಯ ಕಂಡ ಪ್ರೇಮ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 10:05 IST
Last Updated 9 ಸೆಪ್ಟೆಂಬರ್ 2011, 10:05 IST

ಹಾಸನ: ಯುವತಿಯನ್ನು ಪ್ರೇಮಿಸಿ ಆಕೆ ಗರ್ಭಿಣಿಯಾದ ವಿಚಾರ ತಿಳಿಯು ತ್ತಿದ್ದಂತೆ ಕೈಕೊಡಲು ಪ್ರಯತ್ನಿಸಿದ ವ್ಯಕ್ತಿಯನ್ನು ಕಲೇಶಪುರದ ತಾರುಣ್ಯ ಸಾಂತ್ವನ ಕೇಂದ್ರದವರು ಹಿಡಿದು ಯುವತಿಯೊಂದಿಗೆ ವಿವಾಹ ಮಾಡಿ ರುವ ಘಟನೆ ಬುಧವಾರ ನಡೆದಿದೆ.

ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಆಟೋ ಚಾಲಕ ಕಿಟ್ಟು ಕಳೆದ ಕೆಲವು ವರ್ಷಗಳಿಂದ ಶೋಭಾ ಎಂಬ ಯುವತಿಯನ್ನು ಪ್ರೀತಿಸು ತ್ತಿದ್ದರು. ಈಚೆಗೆ ಅವರು ಗರ್ಭಿಣಿ ಯಾದ ವಿಚಾರ ತಿಳಿಯುತ್ತಿದ್ದಂತೆಯೇ ಆಕೆಗೆ ಮೋಸ ಮಾಡಲು ಪ್ರಯತ್ನಿಸಿದ್ದರು. ಇದರ ಸುಳಿವು ಲಭಿಸುತ್ತಿದ್ದಂತೆಯೆ ಶೋಭಾ ಮಹಿಳಾ ಸಹಾಯವಾಣಿಗೆ ಕರೆಮಾಡಿ ಸಹಾಯ ಯಾಚಿಸಿದ್ದರು. ಮಧ್ಯಪ್ರವೇಶಿಸಿದ ಸಾಂತ್ವನ ಕೇಂದ್ರದವರು ಕಿಟ್ಟುವನ್ನು ಕರೆಸಿ ವಿಚಾರಣೆ ನಡೆಸಿದ್ದರು. ಆಗ ಮದುವೆಗೆ ಒಪ್ಪಿಕೊಂಡಿದ್ದ ಕಿಟ್ಟು  ಆಕೆಯನ್ನು ಮತ್ತೆ ಊರಿಗೆ ಕರೆದೊಯ್ದರೂ, ಮರುದಿನ ಹಾಸನಕ್ಕೆ ಕರೆತಂದು ಹೋಮಿಯೋಪತಿ ಕ್ಲಿನಿಕ್ ಒಂದರಲ್ಲಿ ಗರ್ಭಪಾತ ಮಾಡಿಸಲು ಮುಂದಾಗಿದ್ದರು.

ಈ ಸಂದರ್ಭದಲ್ಲಿ ಶೋಭಾ ಮತ್ತೊಮ್ಮೆ ಸಹಾಯವಾಣಿಯ ಮೊರೆ ಹೋಗಿದ್ದರು. ಕೂಡಲೇ ಆಸ್ಪತ್ರೆಗೆ ಧಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವೈದ್ಯರ ವಿರುದ್ಧ ದೂರು ದಾಖಲಿಸಿ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹೋಮಿಯೋಪತಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಆದರೆ ಸರ್ಕಾರಿ ಆಸ್ಪತ್ರೆಯಿಂದ ಯಾರಿಗೂ ತಿಳಿಯದಂತೆ ಶೋಭಾಳನ್ನು ಅದೇ ದಿನ ರಾತ್ರಿ ಕರೆದೊಯ್ದ ಕಿಟ್ಟು ತಾಲ್ಲೂಕಿನ ಯಾವುದೊ ಹಳ್ಳಿಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದರು. ಮಾತ್ರವಲ್ಲದೆ ಯಾರನ್ನೂ ಸಂಪರ್ಕಿಸಲಾಗದ ಸ್ಥಳದಲ್ಲಿ ಶೋಭಾಳನ್ನು ಇಟ್ಟಿದ್ದರು. ಶೋಭಾ ಸಂಪರ್ಕಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದರು. ಕೊನೆಗೆ ಕಿಟ್ಟು ಬುಧವಾರ ಅನಿವಾರ್ಯವಾಗಿ ಶೋಭಾಳನ್ನು ಹಾಸನಕ್ಕೆ ಕರೆತಂದಿದ್ದರು. ಕೂಡಲೇ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು ಹಾಸನದ ಗ್ರಾಮಾಂತರ ಪೊಲೀಸ್ ಠಾಣೆ ಪಕ್ಕದ ಗಣಪತಿ ದೇವಸ್ಥಾನದಲ್ಲಿ ಇವರ ವಿವಾಹ ಮಾಡಿಸಿದ್ದಲ್ಲದೆ ಹಾಸನ ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿಯನ್ನೂ ಮಾಡಿ ಕಳುಹಿಸಿದ್ದಾರೆ.

ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿ ಚಿದಾನಂದ್, ತಾರುಣ್ಯ ಸಾಂತ್ವನ ಮಹಿಳಾ ಸಹಾಯವಾಣಿಯ ನಿರ್ದೇಶಕಿ ಬಿ.ಪಿ. ರಾಜಮ್ಮ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.