ADVERTISEMENT

ರಸ್ತೆ, ಚರಂಡಿ ಕಾಮಗಾರಿ ಕಳಪೆ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:05 IST
Last Updated 7 ಫೆಬ್ರುವರಿ 2012, 5:05 IST

ಕೊಣನೂರು: ಸುವರ್ಣ ಗ್ರಾಮೋದಯ ಯೋಜನೆ ಯಡಿ ಪಟ್ಟಣದ ವಿವಿಧೆಡೆ ಗುತ್ತಿಗೆದಾರರು ನಡೆಸು ತ್ತಿರುವ ರಸ್ತೆ ಮತ್ತು ಚರಂಡಿ ಕಾಮಗಾರಿ ಕಳಪೆ ಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಸರ್ಕಾರ ಯೋಜನೆಯಡಿ 2.13 ಕೋಟಿ ರೂಪಾಯಿ ಬಿಡುಗಡೆ ಮಾಡಿ ಕಾಮಗಾರಿಯ ನಿರ್ವಹಣೆ ಗುತ್ತಿಗೆದಾರ ರಂಗರಾಜ ಅಯ್ಯಂಗಾರ್ ಅವರಿಗೆ ವಹಿಸಿದೆ. ಕಾಮಗಾರಿಯನ್ನು ನೋಡಿ ಕೊಳ್ಳು ತ್ತಿರುವ ಎಂಜಿನಿಯ ರುಗಳು ಹಾಗೂ ಮೇಸ್ತ್ರಿಗಳು ನಿಯಮ ಗಾಳಿಗೆ ತೂರಿ ಮನಸ್ಸೋ ಇಚ್ಚೆ ತೀರ ಕಳಪೆ ಮಟ್ಟದ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈಗಾಗಲೇ ಗ್ರಾಮದ ಕೆಲವು ಬಡಾವಣೆಗಳಲ್ಲಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯಲ್ಲಿ ಕ್ರೀಯಾ ಯೋಜನೆ ಅನ್ವಯ ಕಾರ್ಯ ನಿರ್ವಹಿಸದೇ ನಿರ್ಲಕ್ಷ್ಯಿಸಿರುವುದು ಕಂಡು ಬರುತ್ತಿದೆ. ಸೋಮವಾರ ಮುತ್ತುಶೆಟ್ಟರ ಓಣಿಗೆ ಸಿಮೆಂಟ್ ಕಾಂಕ್ರಿಟ್ ಹಾಕುವ ಮುನ್ನ ರಸ್ತೆಯ ಮೇಲ್ಮೆಯನ್ನು ಅಗೆದು ನಂತರ ದಪ್ಪ ಜಲ್ಲಿ ಕಲ್ಲುಗಳನ್ನು ಸುರಿದು ಸಮತಟ್ಟುಗೊಳಿಸದೇ ಕಾಂಕ್ರಿಟ್ ಹರಡುತ್ತಿರುವುದು ಕಂಡುಬಂತು.

ಕೆಲ ದಿನಗಳ ಹಿಂದೆ ಮುತ್ತುಶೆಟ್ಟರ ಓಣಿಯ ಹಿಂಭಾಗದ ಬೀದಿಯಲ್ಲಿ ಇದ್ದ ತಗ್ಗು- ದಿಣ್ಣೆಯನ್ನು ಅಗೆದು ರಸ್ತೆ ಯನ್ನು ಸಮತಟ್ಟು ಮಾಡದೇ ಅದರ ಮೇಲೆಯೇ ಜಲ್ಲಿ ಕಲ್ಲುಗಳನ್ನು ಹರಡಲಾಗಿತ್ತು. ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಜಲ್ಲಿ ಕಲ್ಲುಗಳನ್ನು ಪುನಃ  ತೆಗೆದು ಮಣ್ಣು ಅಗೆತ ಮಾಡಿ ಮತ್ತೆ ಜಲ್ಲಿ ಕಲ್ಲುಗಳನ್ನು ಸುರಿದು ಬೇಕಾಬಿಟ್ಟಿ ಸಿಮೆಂಟ್ ಕಾಂಕ್ರಿಟ್ ಹಾಕಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಕಿರಿದಾದ ಈ ಓಣಿಯ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ಓಣಿಯ ಒಂದು ಬದಿ ನಿಮಿರ್ ಸಿರುವ ಚರಂಡಿ ವಾಸದ ಮನೆಗಳ ಗೋಡೆ ಮತ್ತು ಬಾಗಿಲುಗಳಿಗೆ ತಾಗಿಕೊಂಡಂತೇ ಹಾದು ಹೋಗಿದೆ. ಅಲ್ಲಿ ರಸ್ತೆಯನ್ನು ಆಳಕ್ಕೆ ಅಗೆದು ಸರಿಯಾಗಿ ಚರಂಡಿ ನಿರ್ಮಿಸದೇ ಇರುವುದರಿಂದ ಮಳೆ ಬಂದರೆ ಸಾಕು ಚರಂಡಿ ನೀರು ನೇರವಾಗಿ ವಾಸದ ಮನೆಯೊಳಗೆ ನುಗ್ಗಿ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸಬೇಕಾ ಗುತ್ತದೆ ಎನ್ನುವುದು ನಿವಾಸಿಗಳ ಅಳಲು.

ತಾ.ಪಂ. ಇ.ಓ. ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಧಾವಿಸಿ ಗುತ್ತಿಗೆದಾರರು ನಿಯಮದಂತೆ ಕಾಮಗಾರಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.