ADVERTISEMENT

ರೈಸ್‌ಮಿಲ್‌ ಮಾಲೀಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 4:15 IST
Last Updated 17 ಡಿಸೆಂಬರ್ 2013, 4:15 IST

ಹೊಳೆನರಸೀಪುರ: ಸರ್ಕಾರದ ಲೆವಿ ನೀತಿ ಖಂಡಿಸಿ ತಾಲ್ಲೂಕು ರೈಸ್‌ಮಿಲ್‌ ಮಾಲೀಕರು ಸೋಮವಾರ ಮಿಲ್‌ಗಳನ್ನು ಬಂದ್‌ ಮಾಡಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇಲ್ಲಿನ ಚೆನ್ನಾಂಬಿಕಾ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಸರ್ಕಾರದ ಲೆವಿ ನೀತಿಗೆ ಧಿಕ್ಕಾರ ಕೂಗುತ್ತಾ ಪೇಟೆ ಮುಖ್ಯರಸ್ತೆಯಲ್ಲಿ ಹೊರಟು ತಾಲ್ಲೂಕು ಕಚೇರಿಗೆ ತಲುಪಿದರು.

ಹಿಂದೆ ರಾಜ್ಯದಲ್ಲಿ ಸರ್ಕಾರ ರೈಸ್‌ಮಿಲ್‌ ಮಾಲೀಕರಿಗೆ 1.5 ಲಕ್ಷ ಕ್ವಿಂಟಲ್‌ ಲೆವಿ ನಿಗದಿ ಮಾಡಿತ್ತು. ಈಗ ಇದ್ದಕ್ಕಿದ್ದಂತೆ 13 ಲಕ್ಷ ಟನ್‌ ನಿಗದಿ ಮಾಡಿದ್ದು ಇದನ್ನು ನೀಡಲು ರೈಸ್‌ಮಿಲ್‌ ಮಾಲೀಕರಿಗೆ ಸಾಧ್ಯವೇ ಆಗುವುದಿಲ್ಲ ಎಂದು ಮೂಡಲಹಿಪ್ಪೆ ರೈಸ್‌ಮಿಲ್‌ ಮಾಲೀಕ ಮಂಜುನಾಥ್‌ ತಿಳಿಸಿದರು. ನಾವು ನೀಡುವ ಅಕ್ಕಿಗೆ ಸರ್ಕಾರ ಕೆ.ಜಿ.ಗೆ 21 ರೂಪಾಯಿ ನಿಗದಿ ಮಾಡಿದೆ. ಆದರೆ ಸರ್ಕಾರ ಛತ್ತೀಸ್‌ಗಡದಿಂದ ಖರೀದಿಸುತ್ತಿರುವ ಅಕ್ಕಿಗೆ 28 ರೂಪಾಯಿ ದರ ನೀಡಿ ಸಾಗಾಣಿಕಾ ವೆಚ್ಚವನ್ನೂ ಭರಿಸಿ ತರಿಸಿಕೊಳ್ಳುತ್ತಿದೆ ಎಂದು ಹಳ್ಳಿ ಮೈಸೂರು ದೇವರಾಜು ದೂರಿ ಸರ್ಕಾರ ಇಂತಹ ನೀತಿಯನ್ನು ಕೈಬಿಟ್ಟು ಸಮಾನ ಬೆಲೆ ನೀಡಬೇಕು ಎಂದರು.

ಕೆಲವು ಕಡೆ 290 ರೂಪಾಯಿ ಬೆಂಬಲ ಬೆಲೆ ನೀಡುತ್ತಿದ್ದು ನಮಗೂ ಆ ಬೆಂಬಲ ಬೆಲೆ ನೀಡಲಿ ಎಂದು ಆಗ್ರಹಿಸಿದ್ದಾರೆ. ರೈಸ್‌ಮಿಲ್‌ ಮಾಲೀಕರ ಸಂಘದ ಅಧ್ಯಕ್ಷ ಎಚ್‌.ಆರ್. ಮುಕುಂದೇಗೌಡ, ಕಾರ್ಯದರ್ಶಿ ಶಿವಾನಂದ್‌, ಜಯಣ್ಣ, ಜಯಕುಮಾರ್‌, ಎಚ್‌.ಎಸ್‌. ಸುದರ್ಶನ್‌, ಕೆ.ಎಂ. ಜಗದೀಶ್‌, ನರಸಿಂಹ ಸೇರಿದಂತೆ ತಾಲ್ಲೂಕಿನ ಎಲ್ಲ ರೈಸ್‌ಮಿಲ್‌ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.