ಸಕಲೇಶಪುರ: ವಾಯು ಮಾಲಿನ್ಯದಿಂದಾಗಿ ದೇಶದಲ್ಲಿ ಅನೇಕರು ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕುರಿತು ಜಾಗೃತಿ ಅಗತ್ಯ ಎಂದು ಸಹಾಯಕ ಸಾರಿಗೆ ಅಧಿಕಾರಿ ಶಶಿಕಲಾ ಹೇಳಿದರು.
ಇಲ್ಲಿಯ ರೋಟರಿ ಆಂಗ್ಲ ಶಾಲೆಯಲ್ಲಿ ರೋಟರಿ ಸಂಸ್ಥೆ ಈಚೆಗೆ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆಯಲ್ಲಿ ಮಾತನಾಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿಯಂತೆ ದೇಶದಲ್ಲಿ 3.48 ಕೋಟಿ ಜನರು ಶ್ವಾಸಕೋಶದ ಸೋಂಕಿನಿಂದ ನರಳುತ್ತಿದ್ದಾರೆ ಎಂದರು.
ವಾಹನಗಳನ್ನು ತಪಾಸಣೆಗೆ ಒಳಪಡಿಸಿ ವಾಯು ಮಾಲಿನ್ಯ ಪರೀಕ್ಷಣಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಪೆಟ್ರೋಲ್ಗೆ ಸೀಮೆಎಣ್ಣೆ ಮಿಶ್ರಣ ನಿಲ್ಲಿಸಬೇಕು. ಪೇಪರ್ ಹಾಗೂ ಇನ್ನಿತರ ತ್ಯಾಜ್ಯಗಳಿಗೆ ಬೆಂಕಿ ಹಾಕಿ ಹೊಗೆ ಮಾಡುವುದು ಬಿಡಬೇಕು ಎಂದು ಸಲಹೆ ಮಾಡಿದರು. ಮನೆಗೊಂದು ಮರ, ಮಕ್ಕಳಿಗೊಂದು ಮರ, ಶಾಲೆಯಲ್ಲಿ ವಿದ್ಯಾರ್ಥಿಗೊಂದು ಮರನೆಟ್ಟು ಬೆಳೆಸುವುದನ್ನು ರೂಢಿ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಮೋಟಾರು ವಾಹನ ತನಿಖಾಧಿಕಾರಿ ಸತೀಶ್ಕುಮಾರ್, ರೋಟರಿ ಸಂಸ್ಥೆ ಅಧ್ಯಕ್ಷ ಜಯಸ್ವಾಮಿ, ಕಾರ್ಯದರ್ಶಿ ಕೃಷ್ಣಮೂರ್ತಿ ಖಂಡಿಗೆ, ರೋಟರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎನ್.ಸಿ. ಸ್ವಾಮಿ, ಮಾಜಿ ಅಧ್ಯಕ್ಷ ಎಚ್.ಆರ್. ಸುರೇಶ್, ಎಸ್ಎಂಎಲ್ ಮೋಟಾರು ತಬೇತಿ ಶಾಲೆಯ ಪ್ರಾಂಶುಪಾಲ ಎಚ್.ಎನ್. ಮಂಜುನಾಥ್, ಶಾಲೆಯ ಪ್ರಾಂಶುಪಾಲ ಸುಮಂತ್ ಭಾರ್ಗವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.