ಹಳೇಬೀಡು: ಹಳೇಬೀಡಿನ ಬಸ್ತಿ ಹಳ್ಳಿಯ ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಹೊಯ್ಸಳರ ಕಾಲದ ಜೈನಬಸದಿಯಲ್ಲಿ ಸೋಮವಾರ ಶಾಂತಿನಾಥ ತೀರ್ಥಂಕರರಿಗೆ ಮಹಾ ಮಸ್ತಕಾಭಿಷೇಕ ನೆರವೇರಿಸಲಾಯಿತು.
ಜೈನ ಧರ್ಮದ 16ನೇ ತೀರ್ಥಂಕರ ಶಾಂತಿನಾಥರ ಜನ್ಮ, ದೀಕ್ಷಾ ಹಾಗೂ ಮೋಕ್ಷ ಕಲ್ಯಾಣ ಒಂದೆ ದಿನ ಬಂದಿರುವ ಕಾರಣ ಹಾಸನ, ಅಡಗೂರು, ಕಡದರಹಳ್ಳಿ, ಹೊಂಗೆರೆಗಳ ಜೈನ್ ಮಿಲನ್ ಸಂಘಟನೆಗಳು ಒಗ್ಗೂಡಿ ಕಾರ್ಯಕ್ರಮ ಆಯೋಜಿಸಿದ್ದವು.
ಜಲ, ಕ್ಷೀರ (ಹಾಲು), ಶ್ರೀಗಂಧ, ಅರಿಸಿನ, ಚಂದನ, ಎಳೆನೀರು, ಕಲ್ಕಚೂರ್ಣ (ಅಕ್ಕಿಹಿಟ್ಟು), ಕಷಾಯ, ಹೂವು ಮೊದಲಾದವುಗಳಿಂದ ಅಭಿ ಷೇಕ ಮಾಡಿದಾಗ 18 ಅಡಿ ಎತ್ತರದ ಸುಂದರ ಶಾಂತಿನಾಥ ತೀರ್ಥಂಕರರ ಮೂರ್ತಿ ಮನಮೋಹಕವಾಗಿ ಕಂಡಿತು. ಒಂದೊಂದು ಅಭಿಷೇಕ ಮಾಡಿ ದಾಗಲೂ ವಿಭಿನ್ನವಾಗಿ ಕಂಡ ತೀರ್ಥಂಕರರ ಮೂರ್ತಿ, ಮುಗುಳ್ನಗೆ, ಸ್ನಿಗ್ದ ಸೌಂದರ್ಯದಿಂದ ಕಂಗೊಳಿತು.
ಮಹಿಳೆಯರು ಜಿನ ಭಕ್ತಿಗೀತೆ ಹಾಡುತ್ತ ಅಭಿಷೇಕ ವೀಕ್ಷಿಸಿದರು. ಪುರೋಹಿತರ ಮಂತ್ರ, ಘೋಷ ದೊಂದಿಗೆ ಶಾಂತಿನಾಥ ಭಗವಾನ್ ಕೀ ಜೈ, ಜೈನಧರ್ಮ ಕೀ ಜೈ ಎನ್ನುವ ಘೋಷಣೆಗಳು ಮೊಳಗಿದವು.
ಜಗತ್ತಿನ ಸಕಲ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ ಮುಕ್ತಿ ದೊರಕಲಿ ಎಂದು ಶಾಂತಿಧಾರೆ ನೆರವೇರಿಸ ಲಾಯಿತು. ಮಹಾಮಸ್ತಕಾಭಿಷೇಕ ವೀಕ್ಷಿಸಲು ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು.
ಪುರೋಹಿತರಾದ ಜಿನರಾಜು, ಎ.ಬಿ.ನಾಗರಾಜು, ಜಿನೇಂದ್ರ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಜೈನ ಮಿಲನ್ ವಲಯ-8ರ ಕಾರ್ಯಧ್ಯಕ್ಷ ಪ್ರಸನ್ನಕುಮಾರ್, ನಿರ್ದೇಶಕ ಎಸ್.ಪಿ. ನಾಗ ಕುಮಾರ್, ಯುವರಾಜ್ ಭಂಡಾರಿ, ಜೈನ್ ಮಿಲನ್ ಆರೋಗ್ಯ ರಕ್ಷಾ ವಿಭಾಗ ಕಾರ್ಯಧ್ಯಕ್ಷ ಎಸ್.ಬಿ. ಸುರೇಶ್ ಮುಖಂಡರಾದ ಎಸ್.ಎನ್. ಅಶೋಕ್ ಕುಮಾರ್, ಪ್ರೇಮ್ಕುಮಾರ್ ಮತ್ತಿತರ ಗಣ್ಯರ ನೇತೃತ್ವ ದಲ್ಲಿ ಧಾರ್ಮಿಕ ಕೈಂಕರ್ಯ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.