ADVERTISEMENT

ಸಕಲ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 3:30 IST
Last Updated 25 ಜನವರಿ 2012, 3:30 IST

ಹಾಸನ:ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲೆಯ ಯೋಧ ಪೌಲ್ ಎಂಬುವವರು ಸೋಮವಾರ ರಾತ್ರಿ ನಿಧನಹೊಂದಿದ್ದು, ಮಂಗಳವಾರ ಸಕಲ ಮಿಲಿಟರಿ ಗೌರವಗಳೊಂದಿಗೆ ಅವರ ಅಂತಿಮ ಸಂಸ್ಕಾರ  ನೆರವೇರಿಸಲಾಯಿತು.

ಹಾಸನ ತಾಲ್ಲೂಕು ಗಾಡೇನಹಳ್ಳಿಯ ಪೌಲ್ 12ವರ್ಷಗಳ ಹಿಂದೆ ಮಿಲಿಟರಿ ಸೇರಿದ್ದರು. ಸಿಪಾಯಿ ರ‌್ಯಾಂಕ್‌ನಲ್ಲಿದ್ದ ಅವರು, ಕೆಲವು ತಿಂಗಳಿಂದ ಭಾರತ-ಚೀನಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

20ದಿನಗಳ ಹಿಂದೆ ರಜೆಪಡೆದು ಊರಿಗೆ ಬಂದಿದ್ದ ಇವರಿಗೆ ತೀವ್ರ ಹೊಟ್ಟೆನೋವು ಕಾಡಿದ್ದರಿಂದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸೋಮವಾರ ರಾತ್ರಿ ನಿಧನಹೊಂದಿದರು.

ಸೇನೆಯ ಸಿಬ್ಬಂದಿಯೇ ಮಂಗಳವಾರ ಬೆಳಿಗ್ಗೆ ಗಾಡೇನಹಳ್ಳಿಗೆ ಬಂದು  ಮೃತ ಯೋಧನಿಗೆ ಸಕಲ ಗೌರವಗಳನ್ನು ಸಲ್ಲಿಸಿದರು. ಮೂರು ಸುತ್ತು ಗೌರವ ತೋಪುಗಳನ್ನು ಸಿಡಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗ್ರಾಮಸ್ಥರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.