ADVERTISEMENT

ಹನಿ ನೀರಿಗೂ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 6:58 IST
Last Updated 12 ಏಪ್ರಿಲ್ 2013, 6:58 IST

ಹಳೇಬೀಡು: ಯಗಚಿ ಹಿನ್ನೀರಿನ ಕುಡಿಯುವ ನೀರು ಸರಬರಾಜಿಗೆ ಪೈಪ್‌ಲೈನ್ ಅಳವಡಿಸಿದ್ದರೂ ನೀರಿಗಾಗಿ ಊರಿಂದ ಊರಿಗೆ ಅಲೆದಾಡುವ ಪರಿಸ್ಥಿತಿ ನರಸೀಪುರ ಹಾಗೂ ಬೋವಿ ಕಾಲೊನಿಯಲ್ಲಿ ನಿರ್ಮಾಣವಾಗಿದೆ.

ಸೂರ್ಯನ ತಾಪ ಧಗಧಗಿಸುತ್ತಿದೆ. ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ಹನಿ ನೀರು ಇಲ್ಲವಾಗಿದೆ. ಗ್ರಾಮ ಪಂಚಾಯಿತಿಯಿಂದ ಮೂರು ಕೊಳವೆ ಬಾವಿ ಕೊರೆಸಿದರೂ ಅಂತರ್ಜಲ ಇಲ್ಲವಾಗಿದೆ. ರೈತರ ಪಂಪ್‌ಸೆಟ್‌ನಲ್ಲಿ ನೀರು ಬರುತ್ತಿಲ್ಲ. ಪ್ರತಿದಿನ ಸರಕು ಆಟೋರಿಕ್ಷಾದಲ್ಲಿ ಬಿಂದಿಗೆ ಹಾಗೂ ಡ್ರಂ ಜೋಡಿಸಿ ಕೊಂಡು ಹಳೇಬೀಡಿನ ಕೈಪಂಪ್‌ಗಳಿಂದ ನೀರು ಹೊರುವಂತಾಗಿದೆ. ಇಲ್ಲಿಯೂ ಅಂತರ್ಜಲಕ್ಕೆ ಹೊಡೆತ ಬಿದ್ದಿದ್ದು, ಒಂದು ಬಿಂದಿಗೆ ನೀರು ತುಂಬಿಸಲು ಗಂಟೆಗಂಟಲೆ ಪಂಪ್ ಮಾಡಬೇಕಿದೆ.

ಬಟ್ಟೆ ತೊಳೆಯಲು ನಾಲ್ಕು ಕಿ ಮೀ. ನಡೆದು ದ್ವಾರಸಮುದ್ರ ಕೆರೆಗೆ ಮಹಿಳೆಯರು ಬರುತ್ತಾರೆ. ಸಾಕಷ್ಟು ಮಹಿಳೆಯರು ಹಸುಗೂಸಿನೊಂದಿಗೆ ಬಂದು ಬಟ್ಟೆ ತೊಳೆಯುವ ಕಷ್ಟ ಅನುಭವಿಸುತ್ತಿದ್ದಾರೆ. ಮಗುವಿ ನೊಂದಿಗೆ ಉರಿಯುವ ಬಿಸಿಲಿನಲ್ಲಿ ನಡೆಯುವಂತಾಗಿದೆ.

ಗ್ರಾಮದಲ್ಲಿ ಸುಮಾರು 600 ಮನೆಗಳಿವೆ. ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಯಗಚಿ ನದಿ ನೀರು ಕೊಟ್ಟರೆ ಜನ ಬದುಕುತ್ತಾರೆ' ಎನ್ನುತ್ತಾರೆ ಕಾಲೊನಿ ನಿವಾಸಿ ಕೊಲ್ಲಾರೆ ಲಕ್ಷ್ಮಣ್.

`ನರಸೀಪುರ ಗ್ರಾಮದ ನೀರಿನ ಸಮಸ್ಯೆಯತ್ತ ಗಮನ ಹರಿಸಲಾಗಿದೆ. ಕೊಳವೆಬಾವಿ ಮಾಡಿಸಿದರೂ ಜಲ ಬರುತ್ತಿಲ್ಲ. ತಾತ್ಕಾಲಿಕವಾಗಿ ನೀರಿನ ಬವಣೆ ನೀಗಿಸಲು ಕ್ರಮಕೈಗೊಳ್ಳ ಲಾಗುವುದು. ಶಾಶ್ವತ ನೀರು ಪೂರೈಕೆ ವಿಚಾರ ಮುಂದಿನ ಸಾಮಾನ್ಯ ಸಭೆಯಲ್ಲಿ ಸಮಿತಿ ಗಮನಕ್ಕೆ ತರಲಾಗು ವುದು' ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.