ಹಾಸನ: ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಸಿ. ರಾಜಣ್ಣರೆಡ್ಡಿ ಅವರು ಗುರುವಾರ ವ್ಯಕ್ತಿಯೊಬ್ಬರಿಂದ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಹಾಸನದ ಸಿಟಿ ಕೊ-ಆಪ್ ಸೊಸೈಟಿಯ ಮಾಜಿ ಉದ್ಯೋಗಿ ಶ್ರೀನಿವಾಸ್ ಎಂಬುವವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ರೆಡ್ಡಿ ಅವರನ್ನು ಬಲೆಗೆ ಕೆಡವಿದ್ದಾರೆ. ಸೊಸೈಟಿಯಲ್ಲಿ ಚಿನ್ನ-ಬೆಳ್ಳಿಯ ಮೌಲ್ಯ ನಿರ್ಧಾರಕರಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರನ್ನು ಕೆಲವು ದಿನಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿತ್ತು.
ಈ ಸಂದರ್ಭದಲ್ಲಿ ತನಗೆ ನ್ಯಾಯ ಒದಗಿಸುವಂತೆ ಅವರು ರಾಜಣ್ಣ ರೆಡ್ಡಿ ಅವರನ್ನು ವಿನಂತಿಸಿದ್ದರು. ಅದಕ್ಕಾಗಿ ರೆಡ್ಡಿ 25ಸಾವಿರ ಲಂಚ ಕೇಳಿದ್ದರು. ಹಣ ನೀಡಲು ಸಿದ್ಧರಿಲ್ಲದ ಶ್ರೀನಿವಾಸ್ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಗುರುವಾರ ಪೊಲೀಸರ ನಿರ್ದೇಶನದಂತೆ ರಾಜಣ್ಣ ರೆಡ್ಡಿ ಅವರಿಗೆ ಹತ್ತುಸಾವಿರ ರೂಪಾಯಿ ಲಂಚ ನೀಡುವ ಸನ್ನಿವೇಶ ಸೃಷ್ಟಿಸಿ ಪೊಲೀಸರು ರೆಡ್ಡಿ ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ವೇದಮೂರ್ತಿ ಅವರ ನಿರ್ದೇಶನದಲ್ಲಿ ಡಿ.ವೈ.ಎಸ್ಪಿ ಶಿವಬಸಪ್ಪ, ಇನ್ಸ್ಪೆಕ್ಟರ್ ಶಾಂತಿನಾಥ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.