ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ವ್ಯಾಪ್ತಿಯ ಹೇಮಾವತಿ ನದಿಗೆ ಕಟ್ಟುತ್ತಿರುವ ತಡೆಗೋಡೆ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಚ್. ಸತೀಶ್ ಸರ್ಕಾರವನ್ನು ಒತ್ತಾಯಿಸಿದರು.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಹಣ ಪೋಲು ಮಾಡಿ ಹೇಮಾವತಿ ನದಿಗೆ 29.50 ಕಿ.ಮೀ. ಯಿಂದ 31.50 ಕಿ.ಮೀ. ವರೆಗೆ ಅನಗತ್ಯವಾಗಿ ತಡೆಗೋಡೆ ಕಟ್ಟಲಾಗುತ್ತಿದೆ. ಇದರಿಂದ ಅಲ್ಲಿನ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.
`ಪ್ರವಾಹದಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ತಡೆಗೋಡೆ ನಿರ್ಮಿ ಸುವ ಅಗತ್ಯವಿದೆ ಎಂಬ ಕಾರಣ ನೀಡಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಅಲ್ಲದೇ, ಇಲ್ಲಿ ಪ್ರವಾಹ ಬಂದ ಬಗ್ಗೆ ಸುಳ್ಳು ದಾಖಲೆ ಒದಗಿಸಲಾಗಿದೆ. ಆದರೆ, ಕಳೆದ 10-15 ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ಪ್ರವಾಹ ಎದುರಾಗಿಲ್ಲ' ಎಂದರು.
ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು. ಆ ಹಣವನ್ನು ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸ ಬೇಕು. ಇಲ್ಲವಾ ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸತೀಶ್ ಎಚ್ಚರಿಸಿದರು.
ನಿರ್ಗಮನದ ಹೊಸ್ತಿಲಲ್ಲಿರುವ ಸರ್ಕಾರ ತರಾತುರಿಯಲ್ಲಿ ಎಲ್ಲ ಕಾಮಗಾರಿಗಳನ್ನು ಮುಗಿಸಲು ಹೊರಟಿದೆ. ನ್ಯಾಯಯುತವಾಗಿ ಅಭಿವೃದ್ಧಿ ಆಗುವುದಾದರೆ, ಅದರಿಂದ ಬಡವರಿಗೆ, ಜನಸಾಮಾನ್ಯರಿಗೆ ಅನುಕೂಲವಾಗುವಂತಿದ್ದರೆ ಆಗಲಿ. ಆದರೆ, ಕೇವಲ ಬಂಡವಾಳ ಶಾಹಿಗಳ ಅಗತ್ಯಕ್ಕಾಗಿ ನಡೆಯುವ ಕೆಲಸಗಳಿಗೆ ನಮ್ಮ ವಿರೋಧವಿದೆ' ಎಂದು ನಾಡಗೌಡ ಕಿಡಿಕಾರಿದರು.
ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗೆ `ಅಲ್ಪಾವಧಿ ಟೆಂಡರ್' ಕರೆಯಲಾಗುತ್ತಿದೆ. ಇದರಿಂದ ಗುಣಮಟ್ಟದ ಕೆಲಸ ನಡೆಯುವುದಿಲ್ಲ. ಇಂತಹ ಪ್ರಕ್ರಿ ಯೆಗಳನ್ನು ನಿಲ್ಲಿಸುವಂತೆ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆದಿದೆಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.