ಹಾಸನ: ‘ಲೋಕಸಭಾ ಚುನಾವಣೆಯಲ್ಲಿ ಸಂಸದ ಎಚ್.ಡಿ. ದೇವೇಗೌಡ ಅವರಿಗೆ ವೀರಶೈವ ಸಮುದಾಯದವರು ಮತ ನೀಡುವುದಿಲ್ಲ ಎಂದು ಸುದ್ದಿ ಹಬ್ಬಿಸುವ ಮೂಲಕ ಕೆಲವು ಮುಖಂಡರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಟೀಕಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಚ್.ಡಿ. ದೇವೇಗೌಡ ಒಂದು ಸಮುದಾಯದ ನಾಯಕರಲ್ಲ. ಎಲ್ಲ ವರ್ಗದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತ ಬ್ಯಾಂಕ್ ಸೃಷ್ಟಿಸುವ ಉದ್ದೇಶದಿಂದ ಕೆಲವರು ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
‘ಜಿಲ್ಲೆಯ ವೀರಶೈವರೆಲ್ಲ ಬಿಜೆಪಿ ಜತೆ ಹಾಗೂ ಕುರುಬರೆಲ್ಲರೂ ಕಾಂಗ್ರೆಸ್ ಪರ ಇದ್ದಾರೆ ಎಂಬ ನಂಬಿಕೆ ಸುಳ್ಳು. ಈ ಬಾರಿ ಚುನಾವಣೆಯಲ್ಲಿ ವೀರಶೈವರು ಗೌಡರನ್ನು ಬೆಂಬಲಿಸಲಿದ್ದಾರೆ. ಬೇಲೂರು ವಿಧಾನಸಭಾ ಕ್ಷೇತ್ರದಿಂದ ಕಳೆದ ಬಾರಿ ಪಕ್ಷ ವೀರಶೈವರಿಗೆ ಟಿಕೆಟ್ ನೀಡಿತ್ತು. ಆದರೆ, ಕಾಂಗ್ರೆಸ್ ಯಾವ ಕ್ಷೇತ್ರದಲ್ಲೂ ಈ ಸಮುದಾಯದವರನ್ನು ಬೆಂಬಲಿಸಿಲ್ಲ ಎಂದರು.
ಜೆಡಿಎಸ್ ಮುಖಂಡ ಲಿಂಗೇಶ್ ಮಾತನಾಡಿ, ‘ದೇವೇಗೌಡರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಪ್ರಮುಖ ನಾಯಕರು. ಜನರಲ್ಲಿರುವ ತಪ್ಪು ಭಾವನೆ ಹೋಗಲಾಡಿಸುವ ದೃಷ್ಟಿಯಿಂದ ಮಾರ್ಚ್ 24 ರಂದು ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜದ ಸಮಾವೇಶ ಏರ್ಪಡಿಸಲಾಗಿದೆ. ಸಭೆಯಲ್ಲಿ ಸಮುದಾಯದ ಅನೇಕ ಮುಖಂಡರು ಭಾಗವಹಿಸುವರು’ ಎಂದು ತಿಳಿಸಿದರು.
ಜೆಡಿಎಸ್ ಮುಖಂಡರಾದ ಸಂಗಮೇಶ್ವರ್, ನಟರಾಜ್, ರಾಜಣ್ಣ, ಪ್ರಸಾದ್, ಸಿಂಗೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.