ADVERTISEMENT

‘ರೈತ ಕೇಂದ್ರಿತ ಅಭಿವೃದ್ಧಿ ನೀತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 8:51 IST
Last Updated 9 ಡಿಸೆಂಬರ್ 2013, 8:51 IST

ಅರಸೀಕೆರೆ: ಕೃಷಿಕರ ಕಷ್ಟ ನಿವಾರಣೆಗಾಗಿ ರೈತ ಕೇಂದ್ರಿತ ಅಭಿವೃದ್ಧಿ ನೀತಿ ರೂಪಿಸುವ ಅಗತ್ಯ ಇದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗಂಡಸಿ  ಎಪಿಎಂಸಿ ಉಪ ಮಾರುಕಟ್ಟೆಯ ಪ್ರಾಂಗಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ  ಇವರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ  ಮೆಕ್ಕೆಜೋಳ ಹಾಗೂ ರಾಗಿ ಖರೀದಿ ಕೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಅವರು  ಮಾತನಾಡಿದರು.

ಅನಾವೃಷ್ಟಿಯಿಂದ ಸಂಕಷ್ಟದಲ್ಲಿ ಇರುವ ರೈತಾಪಿ ವರ್ಗಕ್ಕೆ ನೆರವಾಗಲು ಮೆಕ್ಕೆ ಜೋಳದೊಂದಿಗೆ ರಾಗಿಯನ್ನು ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದ್ದು, ತಾಲ್ಲೂಕಿನ ರೈತರು ಉಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಬೆಲೆ ಕುಸಿತ ಹಾಗೂ ಪ್ರಕೃತಿ ವಿಕೋಪಗಳಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತ ಸಮುದಾಯಕ್ಕೆ ಸಹಾಯ ಹಸ್ತ ಚಾಚಲು ತಾಲ್ಲೂಕಿನ ಗಂಡಸಿ ಹಾಗೂ ಜಾವಗಲ್‌ ಉಪ ಮಾರುಕಟ್ಟೆಗಳಲ್ಲಿ  ಮೆಕ್ಕೆಜೋಳ  ಮತ್ತು ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ ಎಂದರು.
ರೈತರ ಭೂಮಿಗಳ ನಕ್ಷೆ ತಯಾರು ಮಾಡು ಸೇವಾ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ವಿರೋಧಿಸಿದ ಶಾಸಕರು ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ ಎಂದರು.

ಎಪಿಎಂಸಿ ಅಧ್ಯಕ್ಷ  ಅಜ್ಜಪ್ಪ, ಸದಸ್ಯರಾದ ಸಿದ್ದಲಿಂಗಮೂರ್ತಿ, ಕುಶಲ್‌ಕುಮಾರ್‌, ಜಯಕುಮಾರ್‌, ಜಿಲ್ಲಾ ಪಂಚಾಯಿತಿ  ಸದಸ್ಯ ಹುಚ್ಚೇಗೌಡ, ತಹಶೀಲ್ದಾರ್‌ ಕೇಶವ­ಮೂರ್ತಿ, ನಾಗರಹಳ್ಳಿ ಗ್ರಾ.ಪಂ. ಅಧ್ಯಕ್ಷ  ಧರ್ಮೇಶ್‌, ಎಪಿಎಂಸಿ ಮಾಜಿ ಸದಸ್ಯ ರಾಮಚಂದ್ರು ,ಕೃಷ್ಣಪ್ಪ, ದೇವರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.