ADVERTISEMENT

‌₹10 ಕೋಟಿ ಲಂಚ ಕೊಡಲು ಬಂದಿದ್ರು: ರೇವಣ್ಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 1:12 IST
Last Updated 20 ಜೂನ್ 2019, 1:12 IST
   

ಹಾಸನ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಮತ್ತು ಕೆಪಿಟಿಸಿಎಲ್ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಇಂಧನ ಸಚಿವನಾಗಿದ್ದಾಗ ₹ 10 ಕೋಟಿ ಲಂಚ ಕೊಡಲು ಬಂದಿದ್ದರು' ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ನಗರದ ಸಂತೆಪೇಟೆಯಲ್ಲಿರುವ ಕೆಪಿಟಿಸಿಎಲ್ ಕಚೇರಿ ಆವರಣದಲ್ಲಿ ನಡೆದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಹಾಗೂ ಕಾರ್ಯ ಮತ್ತು ಪಾಲನಾ ವಲಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಸಿಬ್ಬಂದಿ ಬೇಡಿಕೆ ಈಡೇರಿಸಿದೆ. ಆದರೆ, ಆ ಹಣ ಮುಟ್ಟದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕೆಪಿಟಿಸಿಎಲ್ ನಿಗಮದ ನೌಕರರಿಗಾಗಿಯೇ ಪ್ರತ್ಯೇಕ ಚಿಕಿತ್ಸಾ ವಿಭಾಗ ನಿರ್ಮಾಣ ಮಾಡಿಸಿದೆ’ ಎಂದರು.

‘ಇಂಧನ ಸಚಿವನಾಗಿದ್ದಾಗ ಸ್ವಚ್ಛ ಆಡಳಿತ ನಡೆಸಿದರೂ ನನ್ನ ಮೇಲೆ ತನಿಖೆ ನಡೆಯಿತು. ಅಂದು ಇಂಧನ ಇಲಾಖೆಯಲ್ಲಿ ವಿಜಯನರಸಿಂಹ ಎಂಬ ಪ್ರಾಮಾಣಿಕ ಅಧಿಕಾರಿ ಇದ್ದರು. ಅವರ ಮೇಲೂ ಬಿಜೆಪಿ ಸರ್ಕಾರ ತನಿಖೆ ನಡೆಸಿತು. ಇದು ಕಳ್ಳರಿರುವ ದೇಶ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಗುರುತಿಸುವುದು ಕಡಿಮೆ. ಕೆ.ಸಿ.ರೆಡ್ಡಿ ಅವರಂತಹ ಪ್ರಾಮಾಣಿಕರು ನನಗೆ ಸಲಹೆಗಾರರಾಗಿದ್ದರು’ ಎಂದೂ ಸ್ಮರಿಸಿದರು.

ADVERTISEMENT

‘ನನ್ನ ಅವಧಿಯಲ್ಲಿ ನೇಮಕಗೊಂಡಿದ್ದ ಸುಮಾರು 450 ಮಾರ್ಗದಾಳುಗಳನ್ನು (ಗ್ಯಾಂಗ್‍ಮನ್) ಇಂಧನ ಸಚಿವೆಯಾಗಿದ್ದ ಶೋಭಾ ಕರಂದಾಜ್ಲೆ ಕಿತ್ತು ಹಾಕಿದರು. ಈಗ ಶೋಭಕ್ಕನ ಬಳಿಗೆ ಹೋಗಿ’ ಎಂದು ಕಾರ್ಯಕ್ರಮದಲ್ಲಿ ನಿಂತಿದ್ದ ಮಾರ್ಗದಾಳುಗಳತ್ತ ವ್ಯಂಗ್ಯವಾಗಿ ನೋಡಿದ ರೇವಣ್ಣ, ‘ಈ ವಿವಾದವನ್ನು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಅವರು ಪರಿಶೀಲಿಸಿ ನ್ಯಾಯ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.