ADVERTISEMENT

15 ಲಕ್ಷ ವಿಮಾ ಪಾಲಿಸಿ ಗಣಕೀಕೃತ ಡಿಸೆಂಬರ್‌ಗೆ ಪೂರ್ಣ

ಸಾಲ ಪಡೆಯುವ ನೌಕರರಿಗೆ ಅನುಕೂಲ; ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 12:52 IST
Last Updated 7 ನವೆಂಬರ್ 2020, 12:52 IST
ಹಾಸನದಲ್ಲಿ ಶನಿವಾರ ನಡೆದ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರು.
ಹಾಸನದಲ್ಲಿ ಶನಿವಾರ ನಡೆದ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರು.   

ಹಾಸನ: ರಾಜ್ಯದ ಸರ್ಕಾರಿ ನೌಕರರ 15 ಲಕ್ಷ ವಿಮಾ ಪಾಲಿಸಿಗಳ ಗಣಕೀಕೃತ ಪ್ರಕ್ರಿಯೆ ಡಿಸೆಂಬರ್‌ ಅಂತ್ಯಕ್ಕೆ
ಪೂರ್ಣಗೊಳ್ಳಲಿದೆ. ಇದರಿಂದ ಸಾಲ, ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರಿ
ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಹೇಳಿದರು.

ನಗರದ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಕುಂದುಕೊರತೆ ಸಭೆಯಲ್ಲಿ
ಮಾತನಾಡಿದ ಅವರು, ಮೂರು ದಶಕಗಳ ಹೋರಾಟದ ಫಲವಾಗಿ ಕಂಪ್ಯೂಟರೀಕರಣ ಮಾಡಲಾಗುತ್ತಿದೆ.
ಹಿಂದೆ ಸಾಲ ಪಡೆದುಕೊಳ್ಳಲು ಸರ್ಕಾರಿ ನೌಕರರ ವಿಮಾ ಇಲಾಖೆ (ಕೆಜೆಐಡಿ)ಗೆ ಅಲೆಯಬೇಕಿತ್ತು. ಗಣಕೀಕೃತಗೊಂಡರೆ ಹತ್ತುದಿನದಲ್ಲಿ ಸಾಲ ಸಿಗಲಿದೆ. ಈ ವರ್ಷ ಸರ್ಕಾರ ಘೋಷಿಸಿರುವ ಬೋನಸ್‌ ₹500
ಕೋಟಿ ಹಣ ಕೋವಿಡ್‌ ಆರ್ಥಿಕ ಸಂಕಷ್ಟದ ಕಾರಣ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.

ಮೃತ ನೌಕರನ ಅಂತ್ಯ ಸಂಸ್ಕಾರಕ್ಕೆ ನೀಡುತ್ತಿದ್ದ ಹಣವನ್ನು ₹ 5ರಿಂದ ₹15 ಸಾವಿರಕ್ಕೆ ಏರಿಸಲಾಗಿದೆ.
ಡಯಾಲಿಸಿಸ್‌ ಮತ್ತು ಕ್ಯಾನ್ಸರ್‌ ರೋಗಿಗಳಿಗೆ ವೇತನ ಸಹಿತ ವಿಶೇಷ ಸಾಂದರ್ಭಿಕ ರಜೆ ನೀಡಲಾಗುತ್ತಿದೆ
ಎಂದರು.

ADVERTISEMENT

ವರ್ಷದಿಂದ 6 ತಿಂಗಳಿಗೊಮ್ಮೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ನೌಕರರ ಕುಂದು ಕೊರತೆ ಸಭೆ
ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿಯೇ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚನೆ ಮಾಡಲಾಗಿದ್ದು, ನೌಕರರು
ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ್‌ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳು
ಸಾಕಷ್ಟಿವೆ. ಮುಂದಿನ 15 ದಿನಗಳಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ಸಮರ್ಥ ಅಭ್ಯರ್ಥಿಗಳನ್ನು
ಆಯ್ಕೆ ಮಾಡಬೇಕಿದೆ. ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಇದೆ. ಹೊಸ ಎನ್‌ಪಿಎಸ್‌ ರದ್ದಪಡಿಸಿ ಹಳೆಯ
ಯೋಜನೆ ಜಾರಿಯಾಗುವಂತೆ ಮಾಡಬೇಕಿದೆ ಎಂದು ಹೇಳಿದರು.

ಸಂಘಟನಾ ಕಾರ್ಯದರ್ಶಿ ಗಿರಿಗೌಡ, ಖಜಾಂಚಿ ಶ್ರೀನಿವಾಸ್‌, ಗೌರವಾಧ್ಯಕ್ಷ ಶಿವರುದ್ರಯ್ಯ, ಜಿಲ್ಲಾ ಘಟಕದ
ಅಧ್ಯಕ್ಷ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ಖಜಾಂಚಿ ಬಿ.ಎಂ. ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.