ADVERTISEMENT

20 ಸಾವಿರ ಮೆಟ್ರಿಕ್‌ ಟನ್‌ ಆಲೂಗಡ್ಡೆ ಬಿತ್ತನೆ ಬೀಜ ಸಂಗ್ರಹ

15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 14:14 IST
Last Updated 8 ಮೇ 2019, 14:14 IST
ಹಾಸನದ ಶೀಥಲ ಗೃಹಗಳಲ್ಲಿ ಸಂಗ್ರಹಿಸಿರುವ ಆಲೂಗಡ್ಡೆ ದಾಸ್ತಾನು ಪರಿಶೀಲಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ.
ಹಾಸನದ ಶೀಥಲ ಗೃಹಗಳಲ್ಲಿ ಸಂಗ್ರಹಿಸಿರುವ ಆಲೂಗಡ್ಡೆ ದಾಸ್ತಾನು ಪರಿಶೀಲಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ.   

ಹಾಸನ: ಜಿಲ್ಲೆಯಲ್ಲಿ ಅಂದಾಜು 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆಯಾಗುವ ನಿರೀಕ್ಷೆಯಿದ್ದು, 8 ಶೀಥಲಗೃಹಗಳಲ್ಲಿ 20324.60 ಮೆಟ್ರಿಕ್‌ ಟನ್ ಆಲೂಗಡ್ಡೆ ಅವಕವಾಗಿದೆ.

ತೋಟಗಾರಿಕೆ ಇಲಾಖೆ ವತಿಯಿಂದ ಆಲೂಗಡ್ಡೆ ಬೆಳೆಗೆ ಪ್ರೋತ್ಸಾಹಧನ ನೀಡಲು ನಿರ್ಧರಿಸುವ ದರದಲ್ಲಿ ಎಪಿಎಂಸಿ ಯಲ್ಲಿ ಆಲೂಗಡ್ಡೆ ಮಾರಾಟ ಮಾಡಬಹುದು. ಒಂದು ವೇಳೆ ವರ್ತಕರು ದುಬಾರಿ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಆಲೂಗಡ್ಡೆ ಗುಣಮಟ್ಟ ಖಾತರಿ ಪಡಿಸಿಕೊಳ್ಳಲು 8 ಶೀಥಲ ಗೃಹಗಳಿಂದ ಮಾದರಿ ಸಂಗ್ರಹಿಸಿ ವಿಶ್ಲೇಷಿಸಲು (ಮೊಳಕೆ ಪ್ರಮಾಣ, ಬ್ಯಾಕ್ಟೀರಿಯಾ, ಫಂಗಸ್ ಹಾಗೂ ವೈರಸ್ ರೋಗಗಳ ಪರೀಕ್ಷೆಗೆ) ಬೀಜ ಪರೀಕ್ಷೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮೇ 10 ರೊಳಗೆ ವರದಿ ಪಡೆಯಲು ತೋಟಗಾರಿಕೆ ಇಲಾಖೆ ಕ್ರಮವಹಿಸಿದೆ.

ADVERTISEMENT

ಎಪಿಎಂಸಿ ಯಲ್ಲಿ ಮಾರಾಟ ಮಾಡುವ ಆಲೂಗಡ್ಡೆಯ ತೂಕ ಖಾತರಿ ಸಂಬಂಧ ಹಾಗೂ ಬೆಳೆಗೆ ಪ್ರೋತ್ಸಾಧನ ವಿತರಣೆಗೆ ಅಗತ್ಯವಿರುವ ಭೂ ದಾಖಲೆಗಳು ರೈತರಿಗೆ ತ್ವರಿತವಾಗಿ ದೊರೆಯುವಂತೆ ಕ್ರಮವಹಿಸಲಾಗಿದೆ. ಬೇಸಾಯಕ್ಕೆ ಅಗತ್ಯ ಪರಿಕರಗಳಾದ ಗೊಬ್ಬರ, ಸಸ್ಯ ಸಂರಕ್ಷಣೆ ಔಷಧಿಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲು ಸೂಕ್ತ ಕ್ರಮವಹಿಸುವಂತೆ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಮುಂಗಾರು ಹಂಗಾಮಿಗೆ ರೈತರಿಗೆ ಮಾರಾಟ ಮಾಡಲು ಶೀಥಲಗೃಹಗಳಲ್ಲಿ ಶೇಖರಿಸಿರುವ ಆಲೂಗಡ್ಡೆಯನ್ನು ಡಿ.ಸಿ ಪರಿಶೀಲಿಸಿದರು. ಎಪಿಎಂಸಿ ಮಾರುಕಟ್ಟೆಗೂ ಭೇಟಿ ನೀಡಿ, ಅಧಿಕಾರಿಗಳ ಜತೆ ಚರ್ಚಿಸಿದರು.

ಆಲೂಗಡ್ಡೆ ಮಾರಾಟ ಸಂಬಂಧ ತೂಕ, ಗುಣಮಟ್ಟ ಪರಿಶೀಲನೆ, ದರ ವ್ಯತ್ಯಾಸ, ರಸಗೊಬ್ಬರ, ಸಸ್ಯ ಸಂರಕ್ಷಣಾ ಔಷಧಿಗಳ ವಿತರಣೆ, ರೈತರಿಗೆ ತಾಂತ್ರಿಕ ನೆರವು ಹಾಗೂ ಇಲಾಖಾ ಸವಲತ್ತು ಒದಗಿಸಲು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.