ಹಾಸನ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಘೋಷಣೆ ಮೂಡಿರುವ ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಜಿಲ್ಲೆಯ 31 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ಆಯ್ಕೆ ಮಾಡಿ ಅನುಮೋದನೆಗೆ ಕಳುಹಿಸಲಾಗಿದೆ.
ಆಯ್ಕೆಯಾದ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ ₹ 3 ಕೋಟಿ ಹಂಚಿಕೆ ಮಾಡಲಾಗುವುದು. 2022ರ ಮಾರ್ಚ್ ಅಂತ್ಯದೊಳಗೆ ನಿಬಂಧನೆಗೆ ಅನುಗುಣವಾಗಿ ಯೋಜನೆ ಪೂರ್ಣಗೊಳಿಸಿಶೇಕಡಾ 100ರಷ್ಟು ಅಭಿವೃದ್ಧಿಯಾಗುವ ಗ್ರಾಮ ಪಂಚಾಯಿತಿಗಳಿಗೆ ₹ 25 ಲಕ್ಷ ಪ್ರೋತ್ಸಾಹ ಧನನೀಡಲಾಗುವುದು.
ಬೀದಿ ದೀಪ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ, ಶಾಲೆಗಳಿಗೆ ನೀರು, ಶೌಚಗೃಹ ವ್ಯವಸ್ಥೆ, ಕೆರೆ, ಕಲ್ಯಾಣಿ ಪುನಶ್ಚೇತನ, ಘನತ್ಯಾಜ್ಯ ವಿಲೇವಾರಿ, ಆಟದ ಮೈದಾನ ನಿರ್ಮಾಣ, ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸೌರ ವಿದ್ಯುತ್ ಅಳವಡಿಕೆ, ಗ್ರಂಥಾಲಯಗಳ ಡಿಜಿಟಲೀಕರಣ, ರೈತರಿಗೆ ಗೋದಾಮು, ಕಾಂಪೌಂಡ್ ನಿರ್ಮಾಣ ಸೇರಿ ಸಮಗ್ರ ಅಭಿವೃದ್ಧಿ ಈ ಯೋಜನೆ ಅಡಿ ನಡೆಯಲಿದೆ.
ರಾಜ್ಯದ 750 ಗ್ರಾಮ ಪಂಚಾಯಿತಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಜಿಲ್ಲೆಯ ಪಂಚಾಯಿತಿಗಳು ಆ ಪಟ್ಟಿಯಲ್ಲ ಸೇರಿ ಮೂಲಕ ಸೌಕರ್ಯ ಅಭಿವೃದ್ಧಿಗೆ ಅನುದಾನ ಪಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.