ಹಿರೀಸಾವೆ: ಕೊರೇಗಾಂವ್ ವಿಜಯೋತ್ಸವದಲ್ಲಿ ದಲಿತರ ಮೇಲಿನ ಹಲ್ಲೆ ಮತ್ತು ವಿದ್ಯಾರ್ಥಿನಿ ದಾನಮ್ಮ ಹತ್ಯೆ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆ ಖಂಡಿಸಿ ಹಿರೀಸಾವೆಯಲ್ಲಿ ಭಾನುವಾರ ದಲಿತಪರ ಸಂಘಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪ್ರತಿಭಟನೆ ಅಂಗವಾಗಿ 2 ಗಂಟೆ ಕಾಲ ಇಲ್ಲಿನ ಅಂಗಡಿ, ಹೋಟೆಲ್ಗಳು, ವಿವಿಧ ಉದ್ಯಮಗಳು ಬಾಗಿಲು ಮುಚ್ಚಿ ಬಂದ್ ಆಚರಿಸಿದವು. ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಕರವೇ, ಜಿ.ಪರಮೇಶ್ವರ ಯುವಕ ಸಂಘ, ಛಲವಾದಿ ಮಹಾ ಮಂಡಲ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿ, ರಾಷ್ಟ್ರೀಯ ಹೆದ್ದಾರಿ 75, ಹಳೆಯ ಬಿಎಂ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಶ್ರೀಕಂಠಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ಹಿರೀಸಾವೆ ಏತ ನಿರಾವರಿಯ ಕಾಮಗಾರಿಯನ್ನು ಶೀಘ್ರ ಮುಗಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಮತ್ತು ಉಡುಪಿ ಮಠದ ಪೇಜಾವರಶ್ರೀ ಅವರ ಸಂವಿಧಾನ ಹೇಳಿಕೆಗಳನ್ನು ಖಂಡಿಸಿದರು.
ದಲಿತ ಸಂಘಟನೆಗಳ ಜಯಣ್ಣ, ಮಂಜುನಾಥ್, ಸೋಮಶೇಖರ್, ಧರ್ಮಯ್ಯ ರೈತ ಸಂಘದ ರಘು, ಕರವೇ ಮಹೇಶ್, ವಾಸು, ರವಿಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.